ADVERTISEMENT

ಮುಂದುವರಿದ ಮಳೆ; ಮತ್ತೆ ಮುಳುಗಿದ ದಂಡೋತಿ ಸೇತುವೆ: ಜನ ಜೀವನ ‌ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 4:38 IST
Last Updated 27 ಸೆಪ್ಟೆಂಬರ್ 2025, 4:38 IST
<div class="paragraphs"><p>ಚಿತ್ತಾಪುರ ತಾಲ್ಲೂಕಿನ ದಂಡೋತಿ ಹತ್ತಿರ ಹೊಲಗಳಿಗೆ ನುಗ್ಗಿರುವ ಕಾಗಿಣಾ ನದಿಯ ಭಾರಿ ಪ್ರವಾಹ...</p></div>

ಚಿತ್ತಾಪುರ ತಾಲ್ಲೂಕಿನ ದಂಡೋತಿ ಹತ್ತಿರ ಹೊಲಗಳಿಗೆ ನುಗ್ಗಿರುವ ಕಾಗಿಣಾ ನದಿಯ ಭಾರಿ ಪ್ರವಾಹ...

   

ಚಿತ್ತಾಪುರ (ಕಲಬುರಗಿ ‌ಜಿಲ್ಲೆ): ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ದಂಡೋತಿ ಸಮೀಪ‌ ಹರಿಯುತ್ತಿರುವ ಕಾಗಿಣಾ ನದಿಯಲ್ಲಿ ಭಾರಿ ಪ್ರವಾಹ ಬಂದಿದ್ದು, ಸೇತುವೆ ಮುಳಗಡೆಯಾಗಿದೆ. ಈ ಮಾರ್ಗದ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಸೇತುವೆ ಮುಳುಗಡೆಯಾಗಿದ್ದರಿಂದ ಈ ಮಾರ್ಗದ ಕಲಬುರಗಿಗೆ ಸಂಚರಿಸುತ್ತಿದ್ದ ಬಸ್ ಸಂಚಾರ ಶಹಾಬಾದ್ ಮಾರ್ಗಕ್ಕೆ, ಸೇಡಂ ಪಟ್ಟಣಕ್ಕೆ ಸಂಚರಿಸುತ್ತಿದ್ದ ಬಸ್ ಸಂಚಾರ ಮಳಖೇಡ ಮಾರ್ಗಕ್ಕೆ ಬದಲಾಯಿಸಲಾಗಿದೆ. ಚಿತ್ತಾಪುರ-ಕಾಳಗಿ ತಾಲ್ಲೂಕುಗಳು ಸಂಪರ್ಕ ಕಡಿದುಕೊಂಡಿವೆ.

ADVERTISEMENT

ಕಾಗಿಣಾ ನದಿಯ ಮೇಲ್ಭಾಗದ ಸೇಡಂ, ಚಿಂಚೋಳಿ, ಕಾಳಗಿ, ಕಲಬುರಗಿ, ಕಮಲಾಪುರ, ಆಳಂದ ತಾಲ್ಲೂಕುಗಳಲ್ಲಿ ವ್ಯಾಪಕ ಮಳೆ ಬರುತ್ತಿದ್ದರಿಂದ ಹಾಗೂ ವಿವಿಧ ಜಲಾಶಯಗಳಿಂದ ಹೊರ ಹರಿವು ಹೆಚ್ಚು ಮಾಡಿದ್ದರಿಂದ ಕಾಗಿಣಾ ನದಿಯು ಅಪಾಯದ ಮಟ್ಟ ಮೀರಿ ತನ್ನ ಸರಹದ್ದು ದಾಟಿ ಹೊಲಗಳಿಗೆ ನುಗ್ಗಿ ಹರಿಯುತ್ತಿದೆ. ಪ್ರವಾಹ ಏರುಗತಿಯಲ್ಲಿದ್ದು ಇನ್ನೂ ಹೆಚ್ಚಾಗುವ ಆತಂಕ ಕಾಡುತ್ತಿದೆ.

ಮುಡಬೂಳ, ಮುತ್ತಗಾ, ಶಂಕರವಾಡಿ, ಗೋಳಾ ಹತ್ತಿರ ಕಾಗಿಣಾ ನದಿಗೆ ಕಟ್ಟಿರುವ ಬಾಂದಾರು ಸೇತುವೆಗಳು ಪ್ರವಾಹದಲ್ಲಿ ಮುಳುಗಡೆಯಾಗಿವೆ. ಮುತ್ತಗಾ-ಕದ್ದರಗಿ ನಡುವಿನ ಸೇತುವೆ ಮುಳುಗಡೆಯಾಗಿದ್ದರಿಂದ ಈ ಮಾರ್ಗದಿಂದ ಚಿತ್ತಾಪುರ – ಶಹಾಬಾದ್ ತಾಲ್ಲೂಕುಗಳು ಸಂಪರ್ಕ ಕಡಿದುಕೊಂಡಿವೆ. ಮಲಕೂಡ ಗ್ರಾಮದ ಹತ್ತಿರ ಬೆಣ್ಣೆತೊರಾ ನದಿಗೆ ಕಟ್ಟಿರುವ ಬಾಂದಾರು ಸೇತುವೆ ಪ್ರವಾಹದಲ್ಲಿ ಮುಳುಗಡೆಯಾಗಿದೆ.

ತಾಲ್ಲೂಕಿನ ಮುಡಬೂಳ ಗ್ರಾಮದ ಹತ್ತಿರ ನಾಗಾವಿ ಹಳ್ಳದಲ್ಲಿ ಪ್ರವಾಹ ಹೆಚ್ಚಾಗಿ ಮತ್ತು ಕಾಗಿಣಾ ನದಿಯ ಪ್ರವಾಹದ ಹಿನ್ನೀರಿನಿಂದ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಮುಡಬೂಳ ಗ್ರಾಮವು ಚಿತ್ತಾಪುರದಿಂದ ಸಂಪರ್ಕ ಕಡಿದುಕೊಂಡಿದೆ. ಇವಣಿ ಗ್ರಾಮದ ಹತ್ತಿರ ಹರಿಯುವ ಹಳ್ಳದಲ್ಲಿ ಪ್ರವಾಹ ಬಂದು ಹಾಗೂ ಕಾಗಿಣಾ ನದಿಯ ಹಿನ್ನೀರು ಸೇರಿ ಸೇತುವೆ ಮುಳುಗಡೆಯಾಗಿದೆ. ಬೆಳಗುಂಪಾ ಗ್ರಾಮದ ಸುತ್ತಲೂ ಎರಡು ಹಳ್ಳಗಳ ಪ್ರವಾಹ ಹರಿಯುತ್ತಿದೆ.

ಮಳೆ ವಿವರ
ಇಲ್ಲಿಗೆ ಸಮೀಪದ ಕಾಳಗಿ ತಾಲ್ಲೂಕಿನ ಮಾಡಬೂಳ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ 65.5 ಮಿ.ಮೀ ಮಳೆದಾಖಲಾಗಿದೆ. ಶನಿವಾರ ನಸುಕಿನ ಜಾವ ಯಾಗಾಪುರದಲ್ಲಿ 64.5 ಮಿ.ಮೀ, ದಂಡೋತಿಯಲ್ಲಿ 65.5 ಮಿ.ಮೀ, ಭಾಗೋಡಿಯಲ್ಲಿ 64.5 ಮಿ.ಮೀ ಮಳೆಯಾಗಿದೆ.

ನಿದ್ದೆಗೆಟ್ಟು ಅಧಿಕಾರಿಗಳ ಅಲೆದಾಟ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆ ಮತ್ತು ಬೆಣ್ಣೆತೊರಾ, ಕಾಗಿಣಾ, ಭೀಮಾ ನದಿಗಳು ಪ್ರವಾಹದಿಂದ ತುಂಬಿ ಭೋರ್ಗರೆಯುತ್ತಿದ್ದು ಸಾರ್ವಜನಿಕರು ಅಪಾಯಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸಿ ತಹಶೀಲ್ದಾರ್ ನಾಗಯ್ಯ ಹಿರೇಮಠ, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಅವರು ನಿದ್ದೆಗೆಟ್ಟು ರಾತ್ರಿಯಿಡಿ ಅಲೆದಾಡಿದ್ದಾರೆ.

ಮುಳುಗಡೆಯಾಗುವ ಸೇತುವೆಗಳ ಸ್ಥಳಕ್ಕೆ ಹಾಗೂ ವಿವಿಧ ಹಳ್ಳಗಳ ನೀರು ನುಗ್ಗುವ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿ ಮಳೆ ಮತ್ತು ಪ್ರವಾಹದ ಸ್ಥಿತಿಗತಿ ಮೇಲಾಧಿಕಾರಿಗಳಿಗೆ ತಿಳಿಸುವ ಕೆಲಸ ಸುರಿಯುವ ಮಳೆಯಲ್ಲಿಯೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.