ಕಲಬುರಗಿ: ‘ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಕಲಬುರಗಿ ಜಿಲ್ಲಾ ಘಟಕ ಹಾಗೂ ಜಿಲ್ಲಾಡಳಿತ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಸೆ.17ರಂದು ವಿಶ್ವಕರ್ಮ ಜಯಂತಿ ಅದ್ದೂರಿಯಾಗಿ ಆಚರಿಸಲಾಗುವುದು’ ಎಂದು ಮಹಾಸಭಾದ ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ಉಸ್ತುವಾರಿ ಅಶೋಕ ಪೊದ್ದಾರ ತಿಳಿಸಿದರು.
‘ನಗರದ ಸಂತ್ರಾಸವಾಡಿಯಲ್ಲಿರುವ ಕಾಳಿಕಾ ಮಂದಿರದಲ್ಲಿ ಅಂದು ಬೆಳಿಗ್ಗೆ 6 ಗಂಟೆಗೆ ವಿಶ್ವಕರ್ಮ ಸುಪ್ರಭಾತ, ವಿಶ್ವಕರ್ಮ ಧ್ವಜಾರೋಹಣ, ಗಣಪತಿ ಸಹಿತ ಪಂಚಬ್ರಹ್ಮ ವಿಶ್ವಕರ್ಮರ ಚಿತ್ರಕ್ಕೆ ಪೂಜೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ವಿಶ್ವಕರ್ಮ ಹಾಗೂ ಸಮಾಜದ ಇತರ ಸತ್ಪುರುಷ ಚಿತ್ರಗಳ ಮೆರವಣಿಗೆ ವಿವಿಧ ವಾದ್ಯವೃಂದದೊಂದಿಗೆ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರ ತನಕ ನಡೆಯಲಿದೆ. ಮಧ್ಯಾಹ್ನ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ವಿಶೇಷ ಉಪನ್ಯಾಸ ಜರುಲಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ಪುಷ್ಪಕ ವಿಮಾನ ನಿರ್ಮಿಸಿದ ಕೀರ್ತಿ ವಿಶ್ವಕರ್ಮರದ್ದು. ಹೀಗಾಗಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ವಿಶ್ವಕರ್ಮರ ಹೆಸರು ಇಡಬೇಕು. ಸಮುದಾಯದ ಆರಾಧ್ಯ ದೈವರಾದ ಮೌನೇಶ್ವರರ ಕುರಿತು ಅಧ್ಯಯನ ಪೀಠ ಸ್ಥಾಪಿಸಬೇಕು. ವಿಶ್ವಕರ್ಮರ ಕುಲಶಕರ್ಮಿಗಳ ಸಾಲ ಮನ್ನಾ ಮಾಡಬೇಕು’ ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
‘ವಿಶ್ವಕರ್ಮ ಜಯಂತ್ಯುತ್ಸವದ ಪ್ರಚಾರಕ್ಕಾಗಿ ಸಮಾಜದ ಯುವಕರಿಂದ ಸೆ.16ರಂದು ವೀರೇಂದ್ರ ಪಾಟೀಲ ಬಡಾವಣೆ ಹಾಗೂ ಹೈಕೋರ್ಟ್ ಬಳಿಯ ಶಾಂತಾ ಆಸ್ಪತ್ರೆಯಿಂದ ಎರಡು ಮಾರ್ಗಗಳಲ್ಲಿ ಬೈಕ್ ರ್ಯಾಲಿ ನಡೆಯಲಿದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲೋಹಿತ ವಾಯಿ, ರಾಮಚಂದ್ರ ವಿಶ್ವಕರ್ಮ, ಕಮಲಾಕರ ವಿಶ್ವಕರ್ಮ ಅರಣಕಲ್, ಮಾರುತಿ ಕಮ್ಮಾರ, ವಿಶ್ವನಾಥ ವಿಶ್ವಕರ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.