ಕಲಬುರಗಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಆದೇಶದಂತೆ ರಾಜ್ಯದಲ್ಲಿ ಹಮ್ಮಿಕೊಂಡ 'ವೋಟ್ ಚೋರ್ ಗದ್ದಿ ಛೋಡೋ ಅಭಿಯಾನದ ಅಂಗವಾಗಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ವತಿಯಿಂದ ನಗರದಲ್ಲಿ ಮಂಗಳವಾರ ಸಹಿ ಸಂಗ್ರಹ ನಡೆಯಿತು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಹಿ ಸಂಗ್ರಹಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ, 'ದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ವೋಟ್ ಚೋರಿ ನಡೆಯುತ್ತಿದೆ. ನಾವು ಮತ ಹಾಕಿದ ಪಕ್ಷ ಯಾಕೆ ಗೆಲವು ಸಾಧಿಸುತ್ತಿಲ್ಲ ಎಂದು ಜನರೆ ಚರ್ಚಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹಾಗೂ ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಆಳಂದ ಕ್ಷೇತ್ರದಲ್ಲಿ ಮತಗಳವಿಗೆ ಯತ್ನಿಸಲಾಯಿತು. ಇಂಥ ಪ್ರಯತ್ನಗಳನ್ನು ರಾಹುಲ್ ಗಾಂಧಿ ಪತ್ತೆ ಮಾಡಿದರು. ಬಳಿಕ ದೇಶದ ಹಲವೆಡೆ ಇಂಥ ಪ್ರಯತ್ನಗಳ ಮೂಲಕ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವುದು ಪತ್ತೆಯಾಗಿದೆ. ದೇಶದಲ್ಲಿ ಮತಕಳವು ಹಾಗೂ ವಾಮಮಾರ್ಗದಿಂದ ಅಧಿಕಾರ ಹಿಡಿಯುವುದನ್ನು ನಿಲ್ಲಿಸಬೇಕು. ಮೋಸದ ಮತದಾನಕ್ಕೆ ಕೊನೆಯಾಗಬೇಕು. ಜೊತೆಗೆ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಲು ಕ್ರಮವಹಿಸಬೇಕು' ಎಂದು ಆಗ್ರಹಿಸಿದರು.
'ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆಯಂತೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಅಭಿಯಾನ ನಡೆಯುತ್ತಿದೆ. ಪ್ರತಿ ಕ್ಷೇತ್ರದಲ್ಲಿ 20 ಸಾವಿರ ಸಹಿ ಸಂಗ್ರಹ ಗುರಿಯಿದೆ' ಎಂದರು.
ಮುಖಂಡರಾದ ಮೇಯರ್ ವರ್ಷಾ ಜಾನೆ, ಉಪಮೇಯರ್ ತೃಪ್ತಿ ಲಾಖೆ, ಕಾಂಗ್ರೆಸ್ ಮುಖಂಡ ಲಾಲ್ ಸೇಠ, ಲಿಂಗರಾಜ ತಾರಫೈಲ್, ರಾಜಗೋಪಾಲ ರೆಡ್ಡಿ, ವಾಣಿಶ್ರೀ ಸಗರಕರ, ಶಿವಾನಂದ ಹೊನಗುಂಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಕೀಲ್ ಅಹ್ಮದ್ ಸರಡಗಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ರೇಣುಕಾ ಸಿಂಗೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.