ಕಲಬುರಗಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸೋಮವಾರ ಸಮ್ಮೇಳನಾಧ್ಯಕ್ಷ ಮುಡಬಿ ಗುಂಡೇರಾವ ಅವರ ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ನಡೆಯಿತು
– ಪ್ರಜಾವಾಣಿ ಚಿತ್ರ
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೋಮವಾರ ಔಪಚಾರಿಕ ಚಾಲನೆ ದೊರೆತಿದೆ.
ಸಮ್ಮೇಳನದ ಅಂಗವಾಗಿ ಪರಿಷತ್ ಭವನದ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ, ನಾಡಧ್ವಜಾರೋಹಣ ಹಾಗೂ ಪರಿಷತ್ ಧ್ವಜಾರೋಹಣದ ನಡೆಯಿತು.
ಬಳಿಕ ವಿವಿಧ ಕಲಾತಂಡಗಳೊಂದಿಗೆ ಸಮ್ಮೇಳನದ ಅಧ್ಯಕ್ಷ ಮುಡಬಿ ಗುಂಡೇರಾವ ಅವರ ಮೆರವಣಿಗೆ ಸಂಭ್ರಮದಿಂದ ನಡೆಯಿತು.
ಡೊಳ್ಳು ಕುಣಿತ, ಮಹಿಳೆಯರ ಹಲಗೆ ವಾದನ, ಸಾಂಪ್ರದಾಯಿಕ ವೇಷತೊಟ್ಟ ಲಂಬಾಣಿ ಕಲಾವಿದರ ಕುಣಿತ, ಸಂಬಾಳ ವಾದನಗಳು ಮೆರವಣಿಗೆ ಅಂದ ಹೆಚ್ಚಿಸಿವೆ.
ನಗರದ ಕನ್ನಡ ಭವನದ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಗೋಷ್ಠಿಗಳು ನಡೆಯಲಿವೆ.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಕಲಬುರಗಿ ಜಿಲ್ಲಾಡಳಿತದ ಭವನದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮಾರ್ಗವಾಗಿ ಕನ್ನಡ ಭವನವರೆಗೆ ನಡೆಯಿತು.
ಲಿಂ.ಶರಣಬಸವಪ್ಪ ಅಪ್ಪ ವೇದಿಕೆಯಲ್ಲಿ ನಡೆಯಲಿರುವ ಸಮ್ಮೇಳವನ್ನು ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಸೋಮಶೇಖರ್ ಉದ್ಘಾಟಿಸುವರು. ಶ್ರೀಶೈಲ ಸಾರಂಗಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಸಮ್ಮೇಳನದ ಅಧ್ಯಕ್ಷ ಮುಡಬಿ ಗುಂಡೇರಾವ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ, ಶರಣ ಬಸವ ವಿವಿ ಕುಲಾಧಿಪತಿ ದಾಕ್ಷಾಯಣಿ ಎಸ್. ಅಪ್ಪ ಸೇರಿದಂತೆ ಹಲವರು ಪಾಲ್ಗೊಳ್ಳುವರು. ಪೊಲೀಸ್ ಅಧಿಕಾರಿ, ಜಾನಪದ ವಿದ್ವಾಂಸ ಜ್ಯೋತಿರ್ಲಿಂಗ ಹೊನಕಟ್ಟಿ ‘ಗುಲಾಬಿ ಗಂಧ’ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.