ADVERTISEMENT

ಕಲಬುರಗಿ: ಕೃಷಿ ಹೊಂಡದೆಡೆಗೆ ರೈತರ ‘ಸುಸ್ಥಿರ’ ನಡಿಗೆ

ಒಂದು ವರ್ಷ 11 ತಿಂಗಳಲ್ಲಿ 718 ಕೃಷಿ ಹೊಂಡ ನಿರ್ಮಿಸಿಕೊಂಡ ರೈತರು: ಅಂತರ್ಜಲ ಮಟ್ಟ ಹೆಚ್ಚಳ

ಭೀಮಣ್ಣ ಬಾಲಯ್ಯ
Published 12 ಡಿಸೆಂಬರ್ 2025, 7:15 IST
Last Updated 12 ಡಿಸೆಂಬರ್ 2025, 7:15 IST
ಕೃಷಿ ಹೊಂಡ
ಕೃಷಿ ಹೊಂಡ   

ಕಲಬುರಗಿ: ಜಿಲ್ಲೆಯಲ್ಲಿ ಮಳೆಯಾಶ್ರಿತ ಭೂಮಿ ಹೆಚ್ಚಿನ ಪ್ರಮಾಣದಲ್ಲಿದ್ದು, ಕೃಷಿ ಭಾಗ್ಯ ಯೋಜನೆಯಡಿ ರೈತರು ಕೃಷಿ ಹೊಂಡ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ.

ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಭೂಮಿ ಮಾತ್ರ ನೀರಾವರಿಗೆ ಒಳಪಟ್ಟಿದೆ. ಅಫಜಲಪುರ, ಜೇವರ್ಗಿ ತಾಲ್ಲೂಕುಗಳು ಮಾತ್ರ ನೀರಾವರಿ ಸೌಲಭ್ಯ ಹೊಂದಿವೆ. ನೀರಿನ ಕೊರತೆ ಕಾರಣಕ್ಕೆ 10 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶದ ಪೈಕಿ 8.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವರ್ಷಕ್ಕೆ ಒಂದೇ ಬೆಳೆ ಬೆಳೆಯಲಾಗುತ್ತದೆ. ಕೆಲವೊಮ್ಮೆ ಮಳೆಯ ಅನಿಶ್ಚಿತತೆ ಕಾರಣಕ್ಕೆ ಒಂದು ಬೆಳೆಯೂ ಕೈಗೆ ಬಾರದ ಸ್ಥಿತಿ ನಿರ್ಮಾಣವಾಗುತ್ತದೆ.

ಆದ್ದರಿಂದ ರೈತರು ಮಳೆ ನೀರು ಸಂಗ್ರಹಿಸಿ, ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸುಸ್ಥಿರ ಕೃಷಿ ಕಡೆಗೆ ಮುಖ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 2024ರಿಂದ 2025ರ ಡಿಸೆಂಬರ್ 8ರವರೆಗೂ 718 ರೈತರು ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ.

ADVERTISEMENT

2024–25ನೇ ಸಾಲಿನಲ್ಲಿ 567 ಹಾಗೂ 2025 ಡಿಸೆಂಬರ್ 8ರವರೆಗೂ 151 ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ. ತೊಗರಿ ಹಾಗೂ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಅಫಜಲಪುರ ತಾಲ್ಲೂಕಿನಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚು ಅಂದರೆ 162 ರೈತರು ಹೊಂಡ ನಿರ್ಮಿಸಿಕೊಂಡಿದ್ದಾರೆ.

ಆಳಂದ ತಾಲ್ಲೂಕಿನಲ್ಲಿ 130, ಚಿತ್ತಾಪುರ 125, ಕಲಬುರಗಿ 105, ಸೇಡಂ 63 ಹಾಗೂ ಜೇವರ್ಗಿಯಲ್ಲಿ 59 ರೈತರು ಈ ಯೋಜನೆಯಡಿ ಸೌಲಭ್ಯ ಪಡೆದು ಕೃಷಿಯಲ್ಲಿ ತೊಡಗಿದ್ದಾರೆ.

ಅಫಜಲಪುರ ತಾಲ್ಲೂಕಿನ ಕರಜಗಿ, ಮಾಶಾಳ, ಉಡಚಣ ಹಟ್ಟಿ ಸೇರಿ ವಿವಿಧ ಗ್ರಾಮಗಳಲ್ಲಿ ಹೆಚ್ಚಿನವರು ಹೊಂಡ ನಿರ್ಮಿಸಿಕೊಂಡು ತರಕಾರಿ, ಪಪ್ಪಾಯ ಹಾಗೂ ಲಿಂಬೆ ಸೇರಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. 

‘ಕೃಷಿ ಭಾಗ್ಯ ಯೋಜನೆ ನಮಗೆ ವರದಾನವಾಗಿದೆ. ಕೃಷಿ ಹೊಂಡ ನಿರ್ಮಾಣಕ್ಕೂ ಮೊದಲು ಜಮೀನಿನಲ್ಲಿ ತೊಗರಿ ಹಾಗೂ ಹತ್ತಿ ಬೆಳೆಯುತ್ತಿದ್ದೆವು. ಈಗ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಕೊಳವೆಬಾವಿಯ ಅಂತರ್ಜಲ ಮಟ್ಟ ವೃದ್ಧಿಸಿದೆ. ಯೋಜನೆ ನಮ್ಮ ಬದುಕು ಹಸನು ಮಾಡಿದೆ’ ಎಂದು ಅಫಜಲಪುರ ತಾಲ್ಲೂಕಿನ ಉಡಚಣ ಹಟ್ಟಿಯ ರೈತ ಬಸವರಾಜ ಮೋಟಿ ತಿಳಿಸಿದರು.

ಸಮದ್‌ ಪಟೇಲ್‌
ಉತ್ತಮ ಸ್ಪಂದನೆ: ಸಮದ್ ಪಟೇಲ್
‘ಜಿಲ್ಲೆಯ ಮಳೆಯಾಶ್ರಿತ ಪ್ರದೇಶದ ರೈತರು ಕೃಷಿ ಹೊಂಡ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಹಿಂದೆ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದವರು ಈ ಯೋಜನೆ ಕಾರಣಕ್ಕೆ ವಾಣಿಜ್ಯ ಬೆಳೆ ಬೆಳೆಯುತ್ತಿದ್ದಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದರು. ‘ಮಳೆ ನೀರಿನ ಸಂಗ್ರಹ ಮತ್ತು ಅದರ ಉತ್ತಮ ಬಳಕೆಯಿಂದ ಕೃಷಿ ಉತ್ಪಾದಕತೆ ಹೆಚ್ಚುತ್ತದೆ. ಇದರಿಂದ ರೈತರ ಆದಾಯವೂ ವೃದ್ಧಿಸುತ್ತದೆ’ ಎಂದು ಹೇಳಿದರು.
ಕೃಷಿ ಹೊಂಡಕ್ಕೆ ಸಹಾಯಧನ
ರೈತರು ಅಗತ್ಯಕ್ಕೆ ಅನುಗುಣವಾಗಿ 10x10x3 ಮೀ 12x12x3 ಮೀ 15x15x3 ಮೀ 18x18x3 ಮೀ ಹಾಗೂ 30x30x3 ಮೀ ಅಳತೆಯ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಬಹುದು.  ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿಕೊಂಡ ಸಾಮಾನ್ಯ ವರ್ಗದ ರೈತರಿಗೆ ನಿರ್ಮಾಣ ವೆಚ್ಚದ ಶೇ 80ರಷ್ಟು ಹಾಗೂ ಪರಿಶಿಷ್ಟ ರೈತರಿಗೆ ಶೇ 90ರಷ್ಟು ಸಹಾಯಧನ ನೀಡಲಾಗುತ್ತದೆ. ತಾಡಪತ್ರಿ ಪಂಪ್‌ಸೆಟ್ ಲಘು ನೀರಾವರಿ ಉಪಕರಣ ಹಾಗೂ ನೆರಳು ಪರದೆಯನ್ನು ನೀಡಲಾಗುತ್ತದೆ.  ಸರ್ಕಾರ ಈ ಯೋಜನೆಯನ್ನು 2014–15ನೇ ಸಾಲಿನಲ್ಲಿ ಜಾರಿ ಮಾಡಿತ್ತು. ಕೆಲ ವರ್ಷ ಅನುದಾನ ಕಡಿತಗೊಳಿಸಿತ್ತು. 2024ರಲ್ಲಿ ಈ ಯೋಜನೆ ಪುನರಾರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.