ಎಫ್ಐಆರ್
ಕಲಬುರಗಿ: ತಾಲ್ಲೂಕಿನ ಕವಲಗಾ(ಬಿ) ಗ್ರಾಮದ ಮರಮ್ಮನ ಗುಡಿ ಮುಂದಿನ ಖಾಲಿ ಜಾಗದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಏಳು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಂದ ಒಟ್ಟು ₹23,500 ನಗದು ಜಪ್ತಿ ಮಾಡಿಕೊಂಡಿದ್ದಾರೆ.
ಜೂಜಾಟಕ್ಕೆ ಸಂಬಂಧಿಸಿದಂತೆ ಸೂರ್ಯಕಾಂತ ಕಪಡಿ, ಶಿವಕುಮಾರ ಮಡಿವಾಳ, ಸಾಯಿಬಣ್ಣ ಮುಸಂಡಿ, ಸಂತೋಷ ಪರೀಟ್, ಭೀಮಣ್ಣ ತಳವಾರ, ಸಂಜುಕುಮಾರ ಅತನೂರ, ಶಿವಯೋಗಿ ತಳಕೇರಿ ವಿರುದ್ಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕಲಬುರಗಿ ತಾಲ್ಲೂಕಿನ ನದಿಸಿನ್ನೂರ ಗ್ರಾಮದ ಹನುಮಾನ ಗುಡಿಯ ಕಟ್ಟೆಯ ಮೇಲೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಿಂದ ₹8 ಸಾವಿರ ಹಾಗೂ ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದ ₹2 ಸಾವಿರ ಸೇರಿದಂತೆ ಒಟ್ಟು ₹10 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ವರ ವಿರುದ್ಧ ಪ್ರಕರಣ
ಜಂಬಗಾ ರಸ್ತೆಯಲ್ಲಿ ಇಟ್ಟಂಗಿ ಭಟ್ಟಿ ಹತ್ತಿರ ಖಾಲಿ ಜಾಗದಲ್ಲಿ ಜೂಜಾಟದಲ್ಲಿ ತೊಡಗಿದ್ದ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಂದ ಒಟ್ಟು ₹5,470 ಜಪ್ತಿ ಮಾಡಿದ್ದಾರೆ. ಶ್ರೀನಿವಾಸ ಜಾನಕರ್, ಪ್ರತಾಪ್ ಅಲಿಯಾಸ್ ಪಪ್ಪು ತಿವಾರಿ, ಶಿವುಕುಮಾರ ಕೌರವ, ಶಿವರಾಜ ಸನಮುಕ್ ವಿರುದ್ಧ ಸಬರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಆರೋಪ
‘ನಾನು ಉಳಿಮೆ ಮಾಡುವ ಜಮೀನಿನಲ್ಲಿ ಶೌಚ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಲಾಗಿದೆ’ ಎಂದು ಭೂಪಾಲ ತೆಗನೂರ ಗ್ರಾಮದ ರೈತ ಚಂದ್ರಕಾಂತ ಗೋಧಿ ವಿಶ್ವವಿದ್ಯಾಲಯ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಐವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳೆ ರಕ್ಷಣೆ
ರಾಮತೀರ್ಥ ಸಮೀಪದ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ವೇಷ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಸಿದ್ದು ಯಳಸಂಗಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಕಾರ್ಯಾಚರಣೆಯಲ್ಲಿ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ಈ ಸಂಬಂಧ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.