ಪ್ರವೀಣ ಜಾಧವ್
ಕಲಬುರಗಿ: ನಗರದ ಬ್ರಹ್ಮಪುರದ ಭೂಮಿಯನ್ನು ಪೋಡಿ ಮಾಡಿಕೊಡಲು ₹3.5 ಲಕ್ಷಕ್ಕೆ ಬೇಡಿಕೆ ಇಟ್ಟು ₹ 1.5 ಲಕ್ಷ ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಜಿಲ್ಲಾ ಭೂದಾಖಲೆಗಳ ಇಲಾಖೆ ಉಪನಿರ್ದೇಶಕ (ಡಿಡಿಎಲ್ಆರ್) ಪ್ರವೀಣ ಜಾಧವ್ ಹಾಗೂ ಸರ್ವೇಯರ್ ಶರಣಗೌಡ ಅವರನ್ನು ಸೋಮವಾರ ಬಂಧಿಸಿದ್ದಾರೆ.
ಪ್ರವೀಣ ಜಾಧವ್ ಅವರು ಕೆಳಹಂತದ ಅಧಿಕಾರಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರಲ್ಲದೇ ಪ್ರತಿ ಕಡತಕ್ಕೆ ಸಹಿ ಹಾಕಲು ಇಂತಿಷ್ಟು ಹಣ ನೀಡಬೇಕು ಎಂದು ತಾಕೀತು ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ನಗರದಲ್ಲಿನ ಬ್ರಹ್ಮಪೂರ ಸರ್ವೆ ನಂ 89/4ನ 12.7 ಎಕರೆ ಭೂಮಿಯ ಪೈಕಿ 25 ಗುಂಟೆ ಜಮೀನನ್ನು ಪೋಡಿ ಮಾಡಲು ₹ 3.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ₹ 1.5 ಲಕ್ಷ ಪಡೆಯುತ್ತಿದ್ದಾಗ ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಡಿವೈಎಸ್ಪಿ ಗೀತಾ ಬೇನಾಳ, ಪಿಐ ರಾಜಶೇಖರ ಹಳಗೋದಿ, ಪ್ರದೀಪ್ ಅವರು ಇಬ್ಬರನ್ನೂ ಬಂಧಿಸಿದರು.
ಡಿಡಿಎಲ್ಆರ್ ಪ್ರವೀಣ ಜಾಧವ್ ಹಾಗೂ ಶರಣಗೌಡ ಕೆಳ ಹಂತದ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದರು. ಅಮಾನತು ಮಾಡುವುದಾಗಿ ಹೆದರಿಸುತ್ತಿದ್ದರು ಎಂದು ಭೂಮಾಪಕ ರೇವಣಸಿದ್ದ ಮೂಲಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.