ADVERTISEMENT

ಕಲಬುರಗಿ: ಪೆಟ್ರೋಲ್‌ ಬಂಕ್‌ನಲ್ಲಿ ಹಲ್ಲೆ, ಚಾಕು ಇರಿತ

ವಿಶ್ವಾರಾಧ್ಯ ದೇವಸ್ಥಾನ ಬಳಿಯ ಬಂಕ್‌ ಕಾರ್ಮಿಕನ ಮೇಲೆ ನಡೆದ ಕೃತ್ಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 6:39 IST
Last Updated 6 ಅಕ್ಟೋಬರ್ 2025, 6:39 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಕಲಬುರಗಿ: ನಗರದ ಆಳಂದ ಚೆಕ್‌ಪೋಸ್ಟ್ ಬಳಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್‌ ಹಾಕುವ ವಿಷಯಕ್ಕೆ ಜಗಳ ತೆಗೆದು ಪೆಟ್ರೊಲ್ ಬಂಕ್‌ ಕಾರ್ಮಿಕನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಗರದ ಆಳಂದ ರಸ್ತೆಯ ವಿಶ್ವಾರಾಧ್ಯ ದೇವಸ್ಥಾನ ಬಳಿಯ ಪೆಟ್ರೋಲ್‌ ಬಂಕ್‌ನಲ್ಲಿ ಅ.3ರಂದು ಸಂಜೆ 8.27ರ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಪೆಟ್ರೋಲ್‌ ಬಂಕ್‌ ಕಾರ್ಮಿಕ ತ್ರಿಶೂಲ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ADVERTISEMENT

ವಿಡಿಯೊದಲ್ಲಿ ಏನಿದೆ?:

ಕಾರ್ಮಿಕ ತ್ರಿಶೂಲ್‌ನೊಂದಿಗೆ ವಾಗ್ವಾದ ನಡೆಸುವ ಹಾಗೂ ಅವರನ್ನು ಕೈಯಿಂದ ಗುದ್ದುವ, ಕಾಲಿಂದ ಒದೆಯುವ ಹಾಗೂ ಮಾರಕಾಸ್ತ್ರದಿಂದ ಹಲ್ಲೆ ಮಾಡುವ ದೃಶ್ಯಗಳು ವಿಡಿಯೊದಲ್ಲಿವೆ. ದುಷ್ಕರ್ಮಿಗಳು ಹೊಡೆಯುವ ತೀವ್ರತೆ ಮತ್ತು ಆಕ್ರೋಶಕ್ಕೆ ಸುತ್ತಲು ಇದ್ದ ಜನರೂ ಹಲ್ಲೆ ತಡೆಯಲು ಮುಂದಾಗಿಲ್ಲ.

‘ಕೊಲೆ ಉದ್ದೇಶದಿಂದ ದುಷ್ಕರ್ಮಿಗಳು ಪೆಟ್ರೋಲ್‌ ಹಾಕುವುದಕ್ಕೆ ಸಂಬಂಧಿಸಿದಂತೆ ಜಗಳ ತೆಗೆದು ಚಾಕುವಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ’ ಎಂದು ತ್ರಿಶೂಲ್‌ ತಂದೆ ಶಿವಕುಮಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ನಗರದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮೊಬೈಲ್‌ ದರೋಡೆ

ಕಲಬುರಗಿ ನಗರದ ಸಿಟಿ ಬಸ್‌ ನಿಲ್ದಾಣದ ಬಳಿ ಬೈಕ್‌ನಲ್ಲಿ ಹೊರಟಿದ್ದವರನ್ನು ತಡೆದ ಮೂರ್ನಾಲ್ಕು ಜನರ ಗುಂಪೊಂದು ಬೈಕ್‌ ಸವಾರರ ಬಳಿಯಿದ್ದ ಮೊಬೈಲ್‌ ಫೋನ್‌ ಹಾಗೂ ಬೆಳ್ಳಿ ಚೈನು ಕಿತ್ತುಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಸ್ನೇಹಿತರೊಂದಿಗೆ ಸಿಟಿ ಬಸ್‌ ನಿಲ್ದಾಣದ ಬಳಿ ಹೊರಟ್ಟಿದ್ದಾಗ ಮೂರ್ನಾಲ್ಕು ಯುವಕರ ಗುಂಪೊಂದು ನಮ್ಮನ್ನು ತಡೆದು ಕನ್ನಡ ಮತ್ತು ಹಿಂದಿಯಲ್ಲಿ ಬೈದು ಹಣ ನೀಡುವಂತೆ ಹೆದರಿಸಿತು. ದುಡ್ಡಿಲ್ಲ ಎಂದಾಗ ಕೈಯಿಂದ ಹೊಡೆದಿದ್ದಾರೆ. ಚಾಕು ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ನನ್ನ ಬಳಿಯಿದ್ದ ₹50 ಸಾವಿರ ಮೊತ್ತದ ಐಫೋನ್‌, 3 ತೊಲ ಬೆಳ್ಳಿಯ ಚೈನು ಹಾಗೂ ಪಾಕೇಟ್‌ ಕಸಿದುಕೊಂಡು ಪರಾರಿಯಾಗಿದ್ದಾರೆ’ ಎಂದು ಮೊಬೈಲ್‌ ಫೋನ್‌ ಹಾಗೂ ಬೆಳ್ಳಿ ಚೈನು ಕಳೆದುಕೊಂಡಿರುವ ಚಿಂಚೋಳಿ ತಾಲ್ಲೂಕಿನ ಪೋಲಕಪಲ್ಲಿಯ ನಿವಾಸಿ, ಚಾಲಕ ತಯ್ಯಬ್‌ ಮೆಹಬೂಬ್‌ಸಾಬ್‌ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಬ್ರಹ್ಮಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ಕಳವು

ಕಲಬುರಗಿಯ ಕೋಟನೂರು(ಡಿ) ಪ್ರದೇಶದ ಮಯೂರ ನಗರದಲ್ಲಿರುವ ಮನೆ ಬಾಗಿಲ ಕೊಂಡಿ ಮುರಿದ ಕಳ್ಳರು ಬೆಡ್‌ರೂಂನ ಲಾಕರ್‌ ಒಡೆದು 20 ಗ್ರಾಂ ಚಿನ್ನಾಭರಣ, 25 ಗ್ರಾಂ ಬೆಳ್ಳಿ ಆಭರಣ ಕದ್ದು ಪರಾರಿಯಾಗಿದ್ದಾರೆ.

ಜ್ಯೋತಿ ರೆಡ್ಡಿ ಚಿನ್ನ–ಬೆಳ್ಳಿ ಆಭರಣ ಕಳೆದುಕೊಂಡ ಮಹಿಳೆ. ಜೇವರ್ಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಜ್ಯೋತಿ ಅವರು ಬೆಂಗಳೂರಿಗೆ ತಂಗಿ ಮನೆಗೆ ಹೋಗಿದ್ದ ವೇಳೆ ಕಳವು ನಡೆದಿದೆ. ಈ ಕುರಿತು ಜ್ಯೋತಿ ನೀಡಿರುವ ದೂರಿನನ್ವಯ ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.