ADVERTISEMENT

ಪರಮೇಶ್ವರನ ಉತ್ಸವವೇ ಮಹಾಶಿವರಾತ್ರಿ: ರಾಜಯೋಗಿನಿ ವಿಜಯಾ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 4:13 IST
Last Updated 15 ಫೆಬ್ರುವರಿ 2026, 4:13 IST
ಕಲಬುರಗಿ ನಗರದ ಸೇಡಂ ರಸ್ತೆಯ ಗೀತಾನಗರದ ಬ್ರಹ್ಮಕುಮಾರೀಸ್‌ ಅಮೃತ ಸರೋವರ ರಿಟ್ರೀಟ್‌ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ‘ಸಂತ ಸಮಾಗಮ’ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಸ್ವರ್ಣಲಿಂಗ ದರ್ಶನಕ್ಕೆ ಚಾಲನೆ ನೀಡಿದರು 
ಕಲಬುರಗಿ ನಗರದ ಸೇಡಂ ರಸ್ತೆಯ ಗೀತಾನಗರದ ಬ್ರಹ್ಮಕುಮಾರೀಸ್‌ ಅಮೃತ ಸರೋವರ ರಿಟ್ರೀಟ್‌ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ‘ಸಂತ ಸಮಾಗಮ’ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಸ್ವರ್ಣಲಿಂಗ ದರ್ಶನಕ್ಕೆ ಚಾಲನೆ ನೀಡಿದರು    

ಕಲಬುರಗಿ: ‘ಪರಮೇಶ್ವರನ ಉತ್ಸವವೇ ಮಹಾಶಿವರಾತ್ರಿ. ಐಹಿಕ ಸುಖ, ಲೌಕಿಕ ಜೀವನ ತ್ಯಜಿಸಿ, ಸಮಾಜಕ್ಕೆ ದಿಕ್ಸೂಚಿಯಾಗಿರುವ ಸ್ವಾಮೀಜಿಗಳು ಶಿವನ ಮಕ್ಕಳಾಗಿದ್ದೀರಿ. ವ್ಯಸನ ಮುಕ್ತ ಅಭಿಯಾನ ಮಠಗಳ ಮೂಲಕ ಸಮಾಜಕ್ಕೆ ತಲುಪಬೇಕಿದೆ’ ಎಂದು ರಾಜಯೋಗಿನಿ ವಿಜಯಾ ಹೇಳಿದರು. 

ನಗರದ ಸೇಡಂ ರಸ್ತೆಯ ಗೀತಾನಗರದ ಬ್ರಹ್ಮಕುಮಾರೀಸ್‌ ಅಮೃತ ಸರೋವರ ರಿಟ್ರೀಟ್‌ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ‘ವ್ಯಸನಮುಕ್ತ ಭಾರತ ಅಭಿಯಾನ’ ಹಾಗೂ ‘ಸಂತ ಸಮಾಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಗತ್ತಿನಾದ್ಯಂತ ಸುಮಾರು 40 ಸಾವಿರ ಕುಮಾರಿಯರು ಲೌಕಿಕ ಜೀವನ ತ್ಯಜಿಸಿ, ಬ್ರಹ್ಮಕುಮಾರಿಯರಾಗಿ ಸಮರ್ಪಿತರಾಗಿದ್ದಾರೆ. ಆಧ್ಯಾತ್ಮಿಕ, ಶೈಕ್ಷಣಿಕ ಸಂಸ್ಥೆಯಾಗಿದ್ದು ಮಹಿಳೆಯರು, ಯುವಜನರನ್ನು ಸಶಕ್ತರನ್ನಾಗಿಸುವ ನಿಟ್ಟಿನಲ್ಲಿ ವ್ಯಸನ ಮುಕ್ತ ಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಕಳಕಳಿಯೊಂದಿಗೆ ಶಾಂತ ರೀತಿಯಲ್ಲಿ ಮನಸ್ಸುಗಳ ಪರಿವರ್ತನೆಗೆ ಹೆಚ್ಚು ಒತ್ತು ನೀಡಲಾಗಿದೆ’ ಎಂದು ಹೇಳಿದರು. 

ADVERTISEMENT

ರಾಜಯೋಗಿ ದೆಹಲಿಯ ಪಿಯುಷ್‌ ಭಾಯಿ ಮಾತನಾಡಿ, ‘ತ್ಯಾಗ, ತಪಸ್ಸು ಹಾಗೂ ಸೇವೆಯ ಮೌಲ್ಯವನ್ನು ಲೆಕ್ಕಹಾಕಲು ಸಾಧ್ಯವಿಲ್ಲ. ತ್ಯಾಗ ಮಾಡಿದಷ್ಟು ಭಾಗ್ಯ ಹೆಚ್ಚುತ್ತದೆ. ತಪಸ್ಸಿನಿಂದ ಜೀವನ ಆದರ್ಶವಾಗುತ್ತದೆ. ಹಾಗೆಯೇ ಬ್ರಹ್ಮಕುಮಾರಿಯರ ಜೀವನವೂ ತ್ಯಾಗದಿಂದ ತುಂಬಿದೆ’ ಎಂದು ಹೇಳಿದರು.

ಮೌಂಟಅಬುವಿನ ರಾಜಯೋಗಿ ಬನಾರಸಿ ಭಾಯಿ ಅವರು, ಎಲ್ಲ ಸ್ವಾಮೀಜಿಗಳಿಗೂ ವ್ಯಸನ ಮುಕ್ತ ಭಾರತ ಅಭಿಯಾನದ ನಿಮಿತ್ತ ಪ್ರತಿಜ್ಞಾವಿಧಿ ಬೋಧಿಸಿದರು.

ಕರುಣೇಶ್ವರ ಮಠದ ಆಂದೋಲಾ ಸಿದ್ಧಲಿಂಗ ಸ್ವಾಮೀಜಿ, ಅಪ್ಪಾರಾವ ದೇವಿಮುತ್ಯಾ, ಬಿಕೆ ಪ್ರೇಮಣ್ಣ ಮಾತನಾಡಿದರು. ಬಾಲಕಿ ವಿದ್ಯಾ ನೆಗಡಿ ನೃತ್ಯ ಪ್ರದರ್ಶಿಸಿದರು. 

ಇದಕ್ಕೂ ಮೊದಲು ವಿವಿಧ ಮಠಾಧೀಶರು ‘ವ್ಯಸನಮುಕ್ತ ಭಾರತ ಅಭಿಯಾನ’ಕ್ಕೆ ಚಾಲನೆ ನೀಡಿದರು. 

ಶರಣಬಸವೇಶ್ವರ ವಿವಿಯ ಕುಲಾಧಿಪತಿ ದಾಕ್ಷಾಯಣಿ ಅಪ್ಪ, ಶಿವಾನಂದ ಸ್ವಾಮೀಜಿ, ರಾಚೋಟೇಶ್ವರ ಸ್ವಾಮೀಜಿ, ರಾಜಶೇಖರ ಶಿವಾಚಾರ್ಯ, ಡಾ.ಅಲ್ಲಮಪ್ರಭು ದೇಶಮುಖ ಸೇರಿದಂತೆ ವಿವಿಧ ಮಠಾಧೀಶರು, ಬ್ರಹ್ಮಕುಮಾರಿಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.