
ವಂಚನೆ–ಪ್ರಾತಿನಿಧಿಕ ಚಿತ್ರ
ಕಲಬುರಗಿ: ಮೊಬೈಲ್ ಫೋನ್ಗೆ ವಾಟ್ಸ್ಆ್ಯಪ್ ಮೂಲಕ ಎಪಿಕೆ ಫೈಲ್ ಕಳುಹಿಸಿದ ಸೈಬರ್ ವಂಚಕರು ವ್ಯಕ್ತಿಯೊಬ್ಬರ ಖಾತೆಯಿಂದ ₹29.68 ಲಕ್ಷ ಎಗರಿಸಿದ್ದಾರೆ.
ನಗರದ ಶಹಾಬಜಾರ್ನ ಜಿಡಿಎ ಕಾಲೊನಿ ನಿವಾಸಿ, ಸರ್ಕಾರಿ ನೌಕರ ರಾಜು ಸೂರ್ಯನ್ ವಂಚನೆಗೆ ಒಳಗಾದವರು.
‘ಅಪರಿಚಿತ ಸೈಬರ್ ವಂಚಕರು ನನ್ನ ವಾಟ್ಸ್ಆ್ಯಪ್ಗೆ ಎಪಿಕೆ ಫೈಲ್ವೊಂದನ್ನು ಕಳಿಸಿ, ನನ್ನ ಮೊಬೈಲ್ ನಂಬರ್ಗೆ ಬರುವ ಎಲ್ಲ ಒಟಿಪಿ, ಎಸ್ಎಂಎಸ್ಗಳನ್ನು ಬೇರೆಯ ನಾಲ್ಕು ಮೊಬೈಲ್ ಸಂಖ್ಯೆಗಳಿಗೆ ವರ್ಗಾವಣೆಯಾಗುವಂತೆ ಮಾಡಿದ್ದಾರೆ. ಬಳಿಕ ಕೆನರಾ ಬ್ಯಾಂಕ್ ಆ್ಯಪ್ನಲ್ಲಿ ಲಾಗಿನ್ ಆಗಿ ನನ್ನ ಬ್ಯಾಂಕ್ ಖಾತೆಯಿಂದ ಒಟ್ಟು ₹29.68 ಲಕ್ಷ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ’ ಎಂದು ರಾಜು ಸೂರ್ಯನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
‘ನನ್ನ ಮೊಬೈಲ್ ಸಿಮ್ ಸಮಸ್ಯೆಯಾಗಿದ್ದರಿಂದ ಹೊಸ ಸಿಮ್ ಖರೀದಿಸಿದ್ದೆ. ಆಗ ಸೇವಾ ಕಂಪನಿಯವರು 24ರಿಂದ 48 ಗಂಟೆ ಎಸ್ಎಂಎಸ್ ಬರಲ್ಲ ಎಂದಿದ್ದರು. ಮರುದಿನವೂ ಸಿಮ್ ಸರಿ ಆಗದ ಕಾರಣ ಮತ್ತೆ ಸಿಮ್ ಸೇವಾ ಕಂಪನಿ ಶೋರೂಂಗೆ ಹೋಗಿದ್ದೆ. ಆಗ ಮತ್ತೊಂದು ಸಿಮ್ ಕೊಟ್ಟು, 24ರಿಂದ 48 ತಾಸು ಎಸ್ಎಂಎಸ್ ಬರಲ್ಲ ಎಂದಿದ್ದರು. ಅದಾದ ಮರುದಿನ ಕೆನರಾ ಬ್ಯಾಂಕ್ ವ್ಯಕ್ತಿ ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಆಗಿದೆಯಾ ನೋಡಿ ಎಂದ. ನನ್ನ ಮೊಬೈಲ್ಗೆ ಯಾವುದೇ ಎಸ್ಎಂಎಸ್ ಬಂದಿರದ ಕಾರಣ ನಾನು ಕರೆ ಕಟ್ ಮಾಡಿದ್ದೆ. ಅದರ ಮರುದಿನ ಡಿ.10ರಂದು ಎಸ್ಎಂಎಸ್ ಸೇವೆ ಆರಂಭವಾದಾಗ ನಾನು ಖಾತೆ ಚೆಕ್ ಮಾಡಿದೆ. ₹45 ಲಕ್ಷ ಇದ್ದ ಖಾತೆಯಲ್ಲಿ ಬರೀ ₹15 ಲಕ್ಷ ತೋರಿಸುತ್ತಿತ್ತು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ಕುರಿತು ಕಲಬುರಗಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿಯ ಸೂಪರ್ ಮಾರ್ಕೆಟ್ನಲ್ಲಿ ಸಣ್ಣ ಪರ್ಸ್ನಲ್ಲಿ ಹಾಕಿ ಇಟ್ಟುಕೊಂಡಿದ್ದ ಚಿನ್ನದ ಜೀರಾಮಣಿ ಸರ ಕಳುವಾಗಿದೆ ಎಂದು ಜೈ ಹನುಮಾನದ ತಾಂಡಾದ ವೃದ್ಧೆ ಶಕುಂತಲಾ ಚವ್ಹಾಣ ಪೊಲೀಸರಿಗೆ ದೂರು ನೀಡಿದ್ದಾರೆ.
‘ಕಿರಾಣಿ ಸಾಮಾನು ಖರೀದಿಗಾಗಿ ತಾಂಡಾದಿಂದ ಸೂಪರ್ ಮಾರ್ಕೆಟ್ಗೆ ಆಟೊದಲ್ಲಿ ಬಂದಿಳಿದೆ.ಬ ಕೊರಳಲ್ಲಿದ್ದರೆ ಯಾರಾದರೂ ಕದ್ದಾರೂ ಎಂದು ಚಿನ್ನದ ಜೀರಾಮಣಿ ಸರ ತೆಗೆದು ಪರ್ಸ್ನಲ್ಲಿ ಹಾಕಿ ದೊಡ್ಡ ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದೆ. ಕೆಲವು ಸಾಮಾನು ಖರೀದಿಸಲು ಓಡಾಡಿದೆ. ಬಳಿಕ ನೋಡಿದರೆ ಚಿನ್ನದ ಸರ, ₹2,800 ನಗದು ಇದ್ದ ಪರ್ಸ್ ಇರಲಿಲ್ಲ. ಯಾರೋ ಕದ್ದಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.