
ಕಲಬುರಗಿ: ಕೃತಕ ಬುದ್ಧಿಮತ್ತೆ (ಎಐ) ಶೃಂಗಸಭೆಯಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಕೀಲ್ ಅಹ್ಮದ್ ಸರಡಗಿ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಶಕೀಲ್ಅಹ್ಮದ್ ಸರಡಗಿ ಮಾತನಾಡಿ, ‘ಸಂವಿಧಾನ ನೀಡಿದ ಹಕ್ಕಿನಡಿಯೇ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆದರೂ, ಅವರನ್ನು ಬಿಜೆಪಿ ಸರ್ಕಾರ ಬಂಧಿಸಿದ್ದು ಖಂಡನೀಯ. ಇದು ಬಿಜೆಪಿಯ ದುಂಡಾವರ್ತನೆಗೆ ನಿದರ್ಶನ’ ಎಂದು ಟೀಕಿಸಿದರು.
‘ಎಪ್ಸ್ಟೈನ್ ಫೈಲ್ಸ್ನಲ್ಲಿ ಹೆಸರಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಘನತೆ ಕುಗ್ಗಿಸಿದ್ದಾರೆ. ದೇಶದ ರೈತರ ಹಿತಾಸಕ್ತಿ ಬಲಿಕೊಟ್ಟು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ಮಂಡಿಯೂರಿದ್ದಾರೆ. ಅವರ ಬಳಿ ಇದ್ಯಾವುದಕ್ಕೂ ಉತ್ತರವಿಲ್ಲ. ಇದೀಗ ಪ್ರತಿಭಟನೆ ನಡೆಸಿದ್ದಕ್ಕಾಗಿ ಬಂಧಿಸಿರುವ ಚಿಬ್ ಅವರನ್ನು ಬಿಡುಗಡೆ ಮಾಡದಿದ್ದರೆ ದೇಶದಾದ್ಯಂತ ಪ್ರತಿಭಟನೆಗಳು ನಡೆಯಲಿವೆ’ ಎಂದು ಎಚ್ಚರಿಸಿದರು.
ಕಾಂಗ್ರೆಸ್ನ ಸಾಮಾಜಿಕ ಜಾಲತಾಣದ ಕಲಬುರಗಿ ಅಧ್ಯಕ್ಷ ಫಾರೂಕ್ ಪಟೇಲ್ ಮುದಬಾಳ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಎಂ.ಡಿ.ಅಸ್ವಾನ್, ರಾಮಪ್ರಸಾದ್ ಕಾಂಬಳೆ, ಪರಶುರಾಮ ನಾಟೀಕಾರ, ಏಜಾಜ್, ರಾಜು ಮಾಳಗೆ, ಶರ್ಫುದ್ದೀನ್ ಮೇಸ್ತ್ರಿ, ಅಸ್ಲಂ ಸಿಂದಗಿ, ಅಮರ್ ಮರ್ಚಂಟ್, ಎಸ್.ಕೆ.ಶೋಯೆಬ್, ಭೀಮು ಅಟ್ಟೂರ, ಚಂದ್ರಶೇಖರ ಹಡಪದ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕೇಂದ್ರದ್ದೇ ಪ್ರಮಾದ: ಶರಣಪ್ರಕಾಶ
‘ಎಐ ಶೃಂಗಸಭೆಯಲ್ಲಿ ಚೀನಾದ ಉತ್ಪನ್ನವನ್ನು ಭಾರತದ ಉತ್ಪನ್ನವಾಗಿ ಪ್ರದರ್ಶಿಸಿದ್ದು ದೇಶಕ್ಕೆ ನಾಚಿಕೆಯ ಸಂಗತಿ. ಅಂಥ ಪ್ರಮಾದ ಎಸೆಗಿದ ಮೋದಿ ಸರ್ಕಾರ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೇಶ ವಿರೋಧಿ ಎನ್ನುವುದು ಸರಿಯಲ್ಲ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಕಲಬುರಗಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.