ADVERTISEMENT

‘ಇ–ಆಫೀಸ್ ಬಳಕೆಯಲ್ಲಿ ಕಲಬುರಗಿ ನಂಬರ್ 1’

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 4:59 IST
Last Updated 18 ಜನವರಿ 2026, 4:59 IST
ಕಲಬುರಗಿಯ ಜಿ.ಪಂ. ಕಾರ್ಯಾಲಯ
ಕಲಬುರಗಿಯ ಜಿ.ಪಂ. ಕಾರ್ಯಾಲಯ   

ಕಲಬುರಗಿ: ಸರ್ಕಾರಿ ಕಚೇರಿಯಲ್ಲಿ ಕಡತಗಳ ತ್ವರಿತ ವಿಲೇವಾರಿಗೆ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಒತ್ತು ನೀಡಿದ ಪರಿಣಾಮ ಇ–ಆಫೀಸ್ ಬಳಕೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತಿ ಇಡೀ ರಾಜ್ಯದಲ್ಲಿಯೇ ನಂಬರ್–1 ಸ್ಥಾನ ಪಡೆದುಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕಳೆದ‌ 2025ನೇ ಕ್ಯಾಲೆಂಡರ್ ವರ್ಷದಲ್ಲಿ ಜಿಲ್ಲೆಯಲ್ಲಿ 2,938 ಇ–ಕಡತ ಸೃಷ್ಟಿಸಿ 54,381 ಕಡತ ವಿಲೇವಾರಿ ಮಾಡಲಾಗಿದೆ. ಸಾರ್ವಜನಿಕರಿಂದ ಸ್ವೀಕೃತವಾದ 13,664 ಪತ್ರಗಳನ್ನು ಇ–ರಸೀದಿಯಡಿ ಸೃಷ್ಟಿಸಿ 3,52,221 ಇ–ರಸೀದಿ ವಿಲೇವಾರಿ ಮಾಡಲಾಗಿದೆ.

ಟಾಪ್‌ 10ನಲ್ಲಿ ಕಲ್ಯಾಣದ ನಾಲ್ಕು ಜಿಲ್ಲೆ:

ADVERTISEMENT

ರಾಜ್ಯದಾದ್ಯಂತ ಕಳೆದ ವರ್ಷ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಇ–ಕಡತ ಬಳಕೆಯಲ್ಲಿ ಟಾಪ್–10 ಜಿಲ್ಲೆಗಳ ಅಂಕಿ ಸಂಖ್ಯೆ ಅವಲೋಕಿಸಿದರೆ 2,938 ಇ–ಕಡತ ಸೃಜಿಸಿ ಕಲಬುರಗಿ ಜಿಲ್ಲಾ ಪಂಚಾಯತ್ ಮೊದಲನೇ‌ ಸ್ಥಾನದಲ್ಲಿದ್ದರೆ, 2,523 ಕಡತ ಸೃಜಿಸಿ ಚಿತ್ರದುರ್ಗ ಜಿ.ಪಂ. ಎರಡನೇ ಹಾಗೂ 2,476 ಕಡತದೊಂದಿಗೆ ಬೆಂಗಳೂರು ನಗರ ಜಿ.ಪಂ. ಜಿಲ್ಲೆ ಮೂರನೇ ಸ್ಥಾನ ಪಡೆದಿದೆ. 2,339 ಇ–ಕಡತ ಸೃಜಿಸಿ ಐದನೇ ಸ್ಥಾನದಲ್ಲಿ ಬೀದರ್, 1,955 ಇ–ಕಡತ ಸೃಜಿಸಿ ಎಂಟನೇ ಸ್ಥಾನದಲ್ಲಿ ಯಾದಗಿರಿ, 1,924 ಇ–ಕಡತ ಸೃಜನೆಯೊಂದಿಗೆ ಒಂಬತ್ತನೇ ಸ್ಥಾನದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಸ್ಥಾನ ಪಡೆದುಕೊಂಡಿದೆ. ಅಗ್ರ 10ರಲ್ಲಿ ಕಲ್ಯಾಣ ಕರ್ನಾಟಕ 4 ಜಿಲ್ಲೆಗಳು ಇ-ಆಫೀಸ್ ಅನುಷ್ಠಾನದಲ್ಲಿ ಸ್ಥಾನ ಪಡೆದಿರುವುದು ಪ್ರದೇಶದ ಗ್ರಾಮೀಣ ಭಾಗದಲ್ಲಿ ಆಡಳಿತ ವೇಗ ಪಡೆದುಕೊಂಡಿರುವುದಕ್ಕೆ ಹಿಡಿದ ಕನ್ನಡಿಯಾಗಿದೆ. ಸುಗಮ‌ ಅಡಳಿತಕ್ಕೆ ಕಲಬುರಗಿ ಜಿಲ್ಲೆ ಮಾದರಿಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಆಳಂದ ತಾಲ್ಲೂಕು ಪಂಚಾಯಿತಿ 1,127 ಇ–ಕಡತ ಸೃಜಿಸಿ 3,560 ಕಡತ ವಿಲೇವಾರಿ ಮತ್ತು 526 ಇ–ರಸೀದಿ ಸೃಷ್ಟಿಸಿ 2,022 ಇ-ರಸೀದಿ ವಿಲೇವಾರಿಯೊಂದಿಗೆ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಅಫಜಲಪುರ ತಾಲ್ಲೂಕು ಪಂಚಾಯಿತಿ 668 ಇ–ಕಡತ ಸೃಜಿಸಿ 3,189 ಕಡತ ವಿಲೇವಾರಿ ಮಾಡಿ ಏಳನೇ ಸ್ಥಾನ ಹಾಗೂ ಕಲಬುರಗಿ ತಾ.ಪಂ. 564 ಇ–ಕಡತ ಸೃಜಿಸಿ 1,527 ಕಡತ ವಿಲೇವಾರಿ ಮಾಡಿ ಒಂಬತ್ತನೇ ಸ್ಥಾನ ಕಾಯ್ದುಕೊಂಡಿದೆ. ಈ ಮೂಲಕ ತಾಲ್ಲೂಕುವಾರು ಟಾಪ್ ಟೆನ್‌ನಲ್ಲಿ ಜಿಲ್ಲೆಯ ಮೂರು ತಾಲ್ಲೂಕುಗಳು ಸ್ಥಾನ ಪಡೆದಿವೆ.

ಪ್ರಿಯಾಂಕ್ ಖರ್ಗೆ
ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅನಗತ್ಯ ವರ್ಷಗಟ್ಟಲೇ ಅಲೆದಾಡುವುದನ್ನು ತಪ್ಪಿಸಲೆಂದೆ ಇ–ಆಫೀಸ್ ಅನುಷ್ಠಾನದ ಮೂಲಕ ಪ್ರತಿ ಅಧಿಕಾರಿ-ಸಿಬ್ಬಂದಿಗೆ ಕಾಲಮಿತಿಲ್ಲಿಯೆ ಕಡತ ವಿಲೇವಾರಿಗೆ ಹೊಣೆಗಾರಿಕೆ ನೀಡಿದ ಫಲ ಇದಾಗಿದೆ
ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.