ಕಲಬುರ್ಗಿ: ಲಂಬಾಣಿ, ಭೋವಿ, ಕೊರಚ ಮತ್ತು ಕೊರಮ ಜನಾಂಗದವರನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ತೆಗೆಯಬಾರದು ಎಂದು ಒತ್ತಾಯಿಸಿ ವಿವಿಧ ತಾಲ್ಲೂಕುಗಳ ತಾಂಡಾ ನಿವಾಸಿಗಳು ಬುಧವಾರ ಪತ್ರ ಚಳವಳಿಗೆ ಚಾಲನೆ ನೀಡಿದರು.
ಕಲಬುರ್ಗಿ, ಅಫಜಲಪುರ, ಆಳಂದ ಸೇರಿದಂತೆ ವಿವಿಧ ತಾಲ್ಲೂಕುಗಳ ತಾಂಡಾ ನಿವಾಸಿಗಳು 10 ಮಾದರಿಯಲ್ಲಿ ಪತ್ರ ಬರೆದು ಅಂಚೆ ಮೂಲಕ ಮುಖ್ಯಮಂತ್ರಿಯವರಿಗೆ ರವಾನಿಸಿದರು.
ಮುಖಂಡ ಅಮರನಾಥ ಚವ್ಹಾಣ್ ಮಾತನಾಡಿ, ‘ಲಂಬಾಣಿ, ಭೋವಿ, ಕೊರಚ, ಕೊರಮ ಜನಾಂಗದವರನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ತೆಗೆದು ಹಾಕಲು ಕೆಲವರು ಸಂಚು ನಡೆಸಿದ್ದು, ಇದಕ್ಕೆ ನಮ್ಮ ವಿರೋಧವಿದೆ. ಅದಕ್ಕಾಗಿ ಪತ್ರ ಚಳವಳಿ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿಗೆ ಒಂದು ಲಕ್ಷ ಪತ್ರ ಕಳುಹಿಸುವ ಗುರಿಯಿದೆ’ ಎಂದರು.
ಸಮಾಜದ ಮುಖಂಡರಾದ ಲಕ್ಷ್ಮಣ ಖೇಮು ರಾಠೋಡ, ಶಂಕರ ಎಲ್.ಚವ್ಹಾಣ್, ರಾಜು ಜಾಧವ, ಸಂಗೀತಾ ಆರ್. ಜಾಧವ, ಗಂಗಾರಾಮ ರಾಠೋಡ ಇದ್ದರು.
ಬಂಜಾರ ಯುವ ಮೋರ್ಚಾದ ಮುಖಂಡರು ಮತ್ತು ಸದಸ್ಯರು ನಗರದ ಮುಖ್ಯ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಈಶ್ವರಪ್ಪ ಅವರಿಗೆ ಪತ್ರ ಸಲ್ಲಿಸಿದರು. ಮೋರ್ಚಾದ ಪಧಾಧಿಕಾರಿಗಳಾದ ಡಾ. ಸಂತೋಷ್ ರಾಠೋಡ, ಚಂದ್ರಶೇಖರ ರಾಠೋಡ, ಈಶ್ವರ ರಾಠೋಡ, ಶ್ರೀಧರ ಚವ್ಹಾಣ್, ಉಮೇಶ್ ಚವ್ಹಾಣ್, ವಿಶಾಲ ನಾಯಕ ,ಅಂಬು ಪವಾರ, ಅಶೋಕ ನಾಯಕ ,ಗಂಗಾರಾಮ ರಾಠೋಡ ಇದ್ದರು.
ಕಲಬುರ್ಗಿಯ ಜೈಹನುಮಾನ ತಾಂಡಾದ ಮಹೇಶ ಚವ್ಹಾಣ್, ವಿನೋದ ಚವ್ಹಾಣ್, ಉಮೇಶ ಜಾಧವ ಮುಂತಾದವರು ಸಹ ಪತ್ರ ಚಳವಳಿ ಕೈಗೊಂಡರು.
ವಿವಿಧ ಸಂಘಟನೆಗಳ ಪ್ರಮುಖರಾದ ವೆಂಕಟೇಶ್ ಎಸ್. ಭಜಂತ್ರಿ, ಸಾಯಿಬಣ್ಣ ಭಜಂತ್ರಿ, ಮಲ್ಲಿಕಾರ್ಜುನ ಭಜಂತ್ರಿ, ಸುಭಾಷ್ ಚಂದ್ರ ಭಜಂತ್ರಿ ಮುಂತಾದವರು ಸಹ ಪತ್ರ ಚಳವಳಿಯಲ್ಲಿ ಪಾಲ್ಗೊಂಡರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.