ವಾಡಿ: ‘ನಿಮ್ಮೆಲ್ಲರ ಆಶೀರ್ವಾದದ ಬಲದಿಂದ ನಾನು ಸರ್ಕಾರದ ಮಹತ್ವದ ಗ್ರಾಮೀಣಾಭಿವೃದ್ಧಿ ಜೊತೆಗೆ ಐಟಿಬಿಟಿ ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದು ಗ್ರಾಮ ಪಂಚಾಯಿತಿಗಳಲ್ಲಿ ಪಾರದರ್ಶಕ ಸರ್ವ ಸೌಲಭ್ಯ ಒದಗಿಸಲು ಪಂಚತಂತ್ರ ಎರಡು ಈಗಾಗಲೇ ಜಾರಿಗೆ ತರುತ್ತಿದ್ದು ಅಂತಿಮ ಅಂತದಲ್ಲಿದೆ’ ಎಂದು ಗ್ರಾಮೀಣ ಅಭಿವೃದ್ಧಿ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕೊಲ್ಲೂರದಿಂದ ಬನ್ನೇಟಿವರೆಗಿನ ₹4.70 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಹಾಗೂ ತರಕಸ್ಪೇಟ್ ಗ್ರಾಮದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಜೊತೆ ಅಭಿವೃದ್ಧಿ ಅಧಿಕಾರಿಗಳ ಚೆಲ್ಲಾಟಕ್ಕೆ ಹಾಗೂ ಭ್ರಷ್ಟಾಚಾರಕ್ಕೆ ಇದರಿಂದ ಕಡಿವಾಣ ಬೀಳಲಿದೆ. ಪ್ರತಿ ಗ್ರಾ.ಪಂ.ಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸುತ್ತಿದ್ದು ಪಿಡಿಒಗಳು ಎಷ್ಟು ದಿನ ಕೆಲಸ ಮಾಡುತ್ತಾರೋ ಅಷ್ಟೇ ವೇತನ ಪಡೆಯಲಿದ್ದಾರೆ. ರಾಜ್ಯದ ಪ್ರತಿ ಪಂಚಾಯಿತಿಗೆ ಡಿಜಿಟಲ್ ಸ್ಪರ್ಶ ನೀಡಲಾಗುವುದು’ ಎಂದು ಅವರು ಹೇಳಿದರು.
ಸರ್ಕಾರದ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದೆ. 5 ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಿದ್ದು ನಮ್ಮ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಯೋಜನೆಗಳನ್ನು ಸಮರ್ಪಕವಾಗಿ ಮುಟ್ಟಿಸಲು ಶ್ರಮ ವಹಿಸಬೇಕು ಎಂದು ಕರೆ ನೀಡಿದರು. ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ ಬಿಜೆಪಿ ಪಕ್ಷವನ್ನು ಜನರು ಕಿತ್ತು ಬಿಸಾಕಿದ್ದಾರೆ. ಬಿಜೆಪಿ ನಾಯಕರು ಎಲ್ಲರೂ ಮನೆ ಸೇರಿದ್ದು ಜನರೆದುರು ಮುಖ ತೋರಿಸಲು ಸಾಧ್ಯವಾಗದೇ ನಮ್ಮ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದರು.
ಕೊಲ್ಲೂರು ಗ್ರಾಮಕ್ಕೆ ಹೈಟೆಕ್ ಗ್ರಂಥಾಲಯ, ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ವೇದಿಕೆ ಮೇಲೆ ಗ್ರಾ.ಪಂ. ಅಧ್ಯಕ್ಷ ಭೀಮಾಶಂಕರ ತೇಲ್ಕರ, ವೀರಣ್ಣಗೌಡ ಪರಸರೆಡ್ಡಿ, ಶಿವಾನಂದ ಪಾಟೀಲ, ಭೀಮಣ್ಣ ಸಾಲಿ, ಮಹೆಮೂದ್ ಸಾಹೇಬ್, ಅರವಿಂದ ಚವ್ಹಾಣ, ನಾಗರೆಡ್ಡಿ ಪಾಟೀಲ, ಮಲ್ಲಿನಾಥಗೌಡ ಸನ್ನತಿ, ಶರಣು ಸಾಹು ಬಿರಾಳ, ಭಾಗಪ್ಪ ಯಾದಗಿರಿ, ಸಾಯಬಣ್ಣ ಬನ್ನೇಟಿ, ಕೃಷ್ಣಾರೆಡ್ಡಿ ಹಿರೆಡ್ಡಿ, ಬಸವರಾಜ ಕೋಟಗಿರಿ, ಶರಣಗೌಡ, ಶರಣು ವಾರದ, ಕುಮಾರಗೌಡ ಪೊಲೀಸ್ ಪಾಟೀಲ, ರಮೇಶ ಹಡಪದ ಸಹಿತ ಹಲವರು ಪಾಲ್ಗೊಂಡಿದ್ದರು. ನಂತರ ಸ್ಥಳೀಯರು ಹಾಗೂ ವಿವಿಧ ಶಾಲೆಗಳ ಅತಿಥಿ ಶಿಕ್ಷಕರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.