ಕಲಬುರ್ಗಿ: ನಗರ ಹೊರವಲಯದಲ್ಲಿ ಶನಿವಾರ ಕಲ್ದುಗಣಿಯ ತಗ್ಗಿನಲ್ಲಿ ನಿಂತಿದ್ದ ನೀರಿನಲ್ಲಿ ಹುಡುಗಾಟ ಮಾಡಲು ಹೋದ ಮೂವರು ಯುವಕರಲ್ಲಿ ಒಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ನಗರದ ಮಿಜುಗುರಿ ಬಡಾವಣೆಯ ಜಾಫರ್ ಅಯೂಬ್(22) ಜಲಸಮಾಧಿಯಾದವ. ರುಕ್ಮೊದ್ದೀನ್ ಕಲ್ಲಿನ ಖಣಿಯಲ್ಲಿ ಈ ಘಟನೆ ನಡೆದಿದ್ದು, ಗೆಳೆಯ ಮುಳುಗುವುದನ್ನು ಸೆರೆಹಿಡಿದ ವಿಡಿಯೊ ವೈರಲ್ ಆಗಿದೆ.
ಕಲ್ಲು ಕ್ವಾರಿಯಿಂದ ಉಂಟಾದ ದೊಡ್ಡ ಕಂದಕದಲ್ಲಿ ನೀರು ನಿಂತಿತ್ತು. ಗೆಳೆಯರೊಂದಿಗೆ ಸುತ್ತಾಡಲು ಹೋಗಿದ್ದ ಜಾಫರ್ ಈಜಾಡಲು ನೀರಿಗೆ ಇಳಿದ.
ಉಳಿದಿಬ್ಬರ ದಡದ ಮೇಲೆ ಕುಳಿತು ಇದರ ವಿಡಿಯೊ ಮಾಡುತ್ತಿದ್ದರು. ನೀರಿನ ಆಳ ಹೆಚ್ಚಾಗಿದ್ದರಿಂದ ಜಾಫರ್ ಮುಳುಗುತ್ತಿದ್ದ. ಒಬ್ಬ ಯುವಕ ಮುಳುಗುವುದನ್ನು ವಿಡಿಯೊ ತೆಗೆಯುತ್ತಿದ್ದರೆ, ಮತ್ತೊಬ್ಬ ದಂಡೆಯ ಮೇಲೆ ಏನಾಯ್ತು ಎನ್ನುತ್ತ ಕಾಲಹರಣ ಮಾಡುತ್ತಿದ್ದ. ತಮ್ಮ ಸ್ನೇಹಿತ ಮುಳುಗುವ ಹಾಗೆ ನಾಟಕವಾಡುತ್ತಿದ್ದಾನೆ ಎಂದೇ ಅವರು ಭಾವಿಸಿ ಅದರ ಮಜಾ ತೆಗೆದುಕೊಂಡರು.
ರಕ್ಷಿಸುವಂತೆ ಜಾಫರ್ ಗೋಗರಿದರು ಸ್ನೇಹಿತರು ಆತನ ಕೈ ಹಿಡಿದು ಮೇಲೆ ಎತಲಿಲ್ಲ. ಕೆಲ ಸಮಯದಲ್ಲೆ ಜಾಫರ್ ಪೂರ್ಣ ಮುಳುಗಿ ಮೃತಪಟ್ಟ.
ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದರು. ಶವ ಹೊರ ತೆಗೆದು ಪಂಚನಾಮೆಗಾಗಿ ಆಸ್ಪತ್ರೆಗೆಸಾಗಿಸಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.