ಸೇಡಂ: ‘ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 50 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಂಕಲ್ಪ ಮಾಡಿದೆ. ಈಗಾಗಲೇ ಎರಡು ವರ್ಷಗಳ ಅವಧಿಯಲ್ಲಿ 15 ಸಾವಿರ ಹುದ್ದೆಗಳ ಭರ್ತಿ ಕ್ರಮ ತೆಗೆದುಕೊಂಡಿದ್ದು ಮುಂದಿನ ದಿನಗಳಲ್ಲಿ 35 ಸಾವಿರ ಹುದ್ದೆಗಳನ್ನು ಮಾಡಿಕೊಳ್ಳಲಾಗುತ್ತದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಪಟ್ಟಣದ ಬಸವ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡ ನೂತನ 6 ಕೋಣೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಈ ಹಿಂದೆ ನಾನು ಅಧಿಕಾರದಲ್ಲಿದ್ದಾಗ ಗ್ರಾಮ ಮತ್ತು ತಾಂಡಾಗಳಿಗೆ ಡಾಂಬಾರರ್ ರಸ್ತೆ ಮಾಡಿದ್ದೆ. ಈ ಅವಧಿಯಲ್ಲಿ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸುಸಜ್ಜಿತ ಶಾಲಾ ಕೋಣೆಗಳನ್ನು ನಿರ್ಮಿಸಿ ಮೂಲ ಸೌಕರ್ಯ ಒದಗಿಸಲಾಗುತ್ತದೆ. ಹಣಾದಿ ರಸ್ತೆಗಳನ್ನು ನಿರ್ಮಿಸುವ ಉದ್ದೇಶವಿದ್ದು ಮುಂದಿನ 3 ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.
ಬಸವ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 6 ಕೋಣೆಗಳ ನಿರ್ಮಾಣಕ್ಕೆ ನಾನೇ ಒಂದೂವರೆ ವರ್ಷಗಳ ಹಿಂದೆ ಅಡಿಗಲ್ಲು ನಿರ್ಮಿಸಿದ್ದೆ. ಈಗ ನಿಗಧಿತ ಅವಧಿಯೊಳಗೆ ಗುಣಮಟ್ಟ ಹಾಗೂ ತ್ವರಿತಗತಿಯಲ್ಲಿ ಶಾಲೆಯ ಕೋಣೆಗಳನ್ನು ನಿರ್ಮಿಸಿರುವುದು ಶ್ಲಾಘನೀಯ ಎಂದು ಗುತ್ತಿಗೆದಾರ ಚಂದ್ರಯ್ಯ ಮಠಪತಿ ಅವರನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ಕಾರ್ಯಕ್ಕೆ ಶ್ಲಾಘಿಸಿ, ಸತ್ಕರಿಸಿದರು.
ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಬಸವರಾಜ ಪಾಟೀಲ ಊಡಗಿ, ಮಹಾಂತಪ್ಪ ಸಂಗಾವಿ, ಜಗನ್ನಾಥ ಚಿಂತಪಳ್ಳಿ, ಹಾಜಿ ನಾಡೆಪಲ್ಲಿ, ರಾಜು ಚವಾಣ್, ಆಶಾ ಜಾಧವ,ಮಹ್ಮದ್ ಗೌಸ್, ಗುತ್ತಿಗೆದಾರ ಚಂದ್ರಯ್ಯಾ ಮಠಪತಿ, ಶರಣಯ್ಯಸ್ವಾಮಿ, ಶಿವಶರಣಪ್ಪ ಜೇವರ್ಗಿ, ಮಾರುತಿ ಹುಜರಾತಿ, ವಿಶ್ವನಾಥ ಮಾವಿನಗಿಡ, ಇಂದ್ರಾವತಿ, ಗೋಪಾಲ ಸೇಡಂಕರ್, ಬಸವರಾಜ ಸಾಗರ್, ಬನ್ನಪ್ಪ, ಆಶಾ ಮಠಪತಿ ಸೇರಿದಂತೆ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.