
ಕಲಬುರಗಿಯ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸೋಮವಾರ ರಾಯಚೂರು ಸಮುದಾಯ ತಂಡದ ಕಲಾವಿದರು ‘ರಕ್ತ ವಿಲಾಪ’ ನಾಟಕ ಪ್ರದರ್ಶನ ನೀಡಿದರು
ಪ್ರಜಾವಾಣಿ ಚಿತ್ರ
ಕಲಬುರಗಿ: ‘ಕಲ್ಯಾಣ ಕರ್ನಾಟಕದಲ್ಲಿ ನಾಟಕ ರಚನೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುವವರ ಸಂಖ್ಯೆ ಹೆಚ್ಚಾಗಬೇಕು. ನಾಟಕ ರಚನೆಯಾದಂತೆ ಕಲಾವಿದರೂ ಈ ನಾಟಕಗಳಲ್ಲಿ ತೊಡಗಿಸಿಕೊಳ್ಳಲು ಅನುವಾಗುತ್ತದೆ’ ಎಂದು ಕಥೆಗಾರ, ಹಂಪಿ ಕನ್ನಡ ವಿ.ವಿ. ನಿವೃತ್ತ ಪ್ರಾಧ್ಯಾಪಕ ಪ್ರೊ.ಅಮರೇಶ ನುಗಡೋಣಿ ಅಭಿಪ್ರಾಯಪಟ್ಟರು.
ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘವು ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಪ್ರೊ.ವಿಕ್ರಮ ವಿಸಾಜಿ ಅವರು ರಚಿಸಿದ ‘ರಕ್ತ ವಿಲಾಪ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಎಸ್.ಎಂ.ಪಂಡಿತ್ ರಂಗಮಂದಿರ ಅತ್ಯಂತ ಸುಸಜ್ಜಿತವಾಗಿ ನವೀಕರಣವಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿ ಇಂತಹ ಮತ್ತೊಂದು ಸರ್ಕಾರಿ ರಂಗಮಂದಿರವಿಲ್ಲ. ಇಲ್ಲಿ ಹೆಚ್ಚು ನಾಟಕಗಳು ಪ್ರದರ್ಶನವಾಗಬೇಕು. ದಕ್ಷಿಣ ಕರ್ನಾಟಕದವರಿಗಿಂತ ನಾವು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವಂತೆ ತೋರಿಸಬೇಕು. ನಾಟಕಗಳನ್ನು ಬರೆದರೆ ಹೆಚ್ಚು ಪ್ರದರ್ಶನ ಮಾಡಬಹುದು. ನಾಟಕ ರಚನೆ ಮಾಡುವ ಹೊಸ ಪೀಳಿಗೆಯನ್ನು ಹುಟ್ಟು ಹಾಕಬೇಕಿದೆ’ ಎಂದರು.
ನಾಟಕ ರಚನೆಕಾರ ಪ್ರೊ.ವಿಕ್ರಮ ವಿಸಾಜಿ, ಕತೆಗಾರ ಮಹಾಂತೇಶ ನವಲಕಲ್, ರಂಗಾಯಣ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ, ಲೇಖಕ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಅರುಣ ಜೋಳದಕೂಡ್ಲಿಗಿ, ರಂಗ ನಿರ್ದೇಶಕ ವಿಶ್ವರಾಜ್ ಪಾಟೀಲ ವೇದಿಕೆಯಲ್ಲಿದ್ದರು.
ನಾಟಕ ಪ್ರದರ್ಶನದ ಬಳಿಕ ಪ್ರೇಕ್ಷಕರೊಂದಿಗೆ ನಾಟಕದ ಕುರಿತು ಸಂವಾದ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.