ADVERTISEMENT

ಸರಳ ಕಲ್ಯಾಣಪರ್ವ ಇಂದಿನಿಂದ; ಫೇಸ್‌ಬುಕ್‌ ಲೈವ್‌ನಲ್ಲಿ ಪ್ರಸಾರಕ್ಕೆ ಸಿದ್ಧತೆ

ನಾಡಿನ ವಿವಿಧ ಗಣ್ಯರು, ಪೀಠಾಧ್ಯಕ್ಷರ ಸಮಾಗಮ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 13:14 IST
Last Updated 29 ಅಕ್ಟೋಬರ್ 2020, 13:14 IST
ಮಾತಾ ಗಂಗಾದೇವಿ
ಮಾತಾ ಗಂಗಾದೇವಿ   

ಕಲಬುರ್ಗಿ: ‘ಬಸವಕಲ್ಯಾಣದಲ್ಲಿರುವ 108 ಅಡಿ ಎತ್ತರದ ಬಸವಣ್ಣನ ಪ್ರತಿಮೆ ಆವರಣದಲ್ಲಿ ಅ.30 ಹಾಗೂ 31ರಂದು 19ನೇ ಕಲ್ಯಾಣಪರ್ವ ಆಯೋಜಿಸಲಾಗಿದೆ. ಆದರೆ, ಈ ಬಾರಿ ಕೋವಿಡ್‌ ಭಯ ಇರುವ ಕಾರಣ ಉತ್ಸವವನ್ನು ನಿಯಮಾನುಸಾರ ಸರಳವಾಗಿ ಆಚರಿಸಲಾಗುವುದು’ ಎಂದು ಕೂಡಲಸಂಗಮ ಬಸವ ಧರ್ಮ ಫೀಠಾಧ್ಯಕ್ಷರಾದ ಮಾತಾ ಗಂಗಾದೇವಿ ತಿಳಿಸಿದರು.

‘18 ವರ್ಷಗಳಿಂದ ಕಲ್ಯಾಣಪರ್ವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ಕೊರೊನಾ ವೈರಾಣು ಹರಡುವ ಭೀತಿ ಇದೆ. ಹಾಗಾಗಿ, ಸರ್ಕಾರದ ನಿಯಮಾವಳಿ ಪ್ರಕಾರ ಸ್ಯಾನಿಟೈಸರ್‌, ಮಾಸ್ಕ್‌, ಅಂತರ ಕಾಪಾಡಿಕೊಳ್ಳುವುದೂ ಸೇರಿದಂತೆ ಎಲ್ಲ ಸುರಕ್ಷತಾ ಕ್ರಮ ಅನುಸರಿಸಲಾಗುವುದು’ ಎದು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘30ರಂದು ಬೆಳಿಗ್ಗೆ 10.30ಕ್ಕೆ ಬಸವಕಲ್ಯಾಣ ಅಲ್ಲಮಪ್ರಭು ಶೂನ್ಯಪೀಠದ ಅಧ್ಯಕ್ಷ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ನೇತೃತ್ವ, ಮಹಾರಾಷ್ಟ್ರದ ಅಲ್ಲಮಗಿರಿ ಅಲ್ಲಮಪ್ರಭು ಯೋಗಪೀಠದ ಅಧ್ಯಕ್ಷ ಬಸವಕುಮಾರ ಸ್ವಾಮೀಜಿ, ಬೀದರ್‌ ಬಸವ ಮಂಟಪದ ಮಾತೆ ಸತ್ಯಾದೇವಿ, ಬಸವಕಲ್ಯಾಣದ ಬಸವ ಮಹಾಮನೆಯ ಬಸವಪ್ರಭು ಸ್ವಾಮೀಜಿ ಅವರು ಸಮ್ಮುಖ ವಹಿಸಲಿದ್ದಾರೆ. ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ, ಬೀದರ್‌ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತ್ ಚಿದ್ರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಲ್ಯಾಣಪರ್ವ ಸ್ವಾಗತ ಸಮಿತಿ ಅಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಹೇಳಿದರು.‌

ADVERTISEMENT

‘ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಅಧ್ಯಕ್ಷರಾದ ಬಸವಾನಂದ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತಾನಾಡುವರು. ಮಾತೆ ಜ್ಞಾನೇಶ್ವರಿ ಮತ್ತು ದಾನೇಶ್ವರಿ ಅವರು ‘ಧರ್ಮಗುರು ಪೂಜೆ’ ನೆರವೇರಿಸುವರು. ರಾಷ್ಟ್ರೀಯ ಬಸವದಳ ಜಿಲ್ಲಾ ಘಟಕದ ಗೌರವಾಧ್ಯಕ್ಷ ರೇವಣಪ್ಪ ಹೆಗ್ಗಣೆ ಧ್ವಜಾರೋಹಣ ನೆರವೇರಿಸುವರು’ ಎಂದರು.‌

‘ಅ.31 ರಂದು ಬೆಳಿಗ್ಗೆ 10.30ಕ್ಕೆ ಧರ್ಮ ಚಿಂತನ ಗೋಷ್ಠಿ ನಡೆಯುವುದು. ಶರಣ ಬಂಧುಗಳು ಫೇಸ್‌ಬುಕ್ ಲೈವ್‌ನಲ್ಲಿ ಎರಡೂ ದಿನಗಳ ಕಾರ್ಯಕ್ರಮ ವೀಕ್ಷಿಸಬಹುದು’ ಎಂದರು.

ರಾಷ್ಟ್ರೀಯ ಬಸವದಳದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಜಿ.ಶೆಟಗಾರ, ಗೌರವಾಧ್ಯಕ್ಷ ರೇವಣಪ್ಪ ಹೆಗ್ಗಣೆ, ಮಾತೆ ಜ್ಞಾನೇಶ್ವರಿ, ಓಂಕಾರೇಶ್ವರಿ ಮಾತಾಜಿ, ನಾಗೇಂದ್ರಪ್ಪ ನಿಂಬರ್ಗಿ, ಶಾಂತಪ್ಪ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.