ಕಮಲಾಪುರ: ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಮಹಗಾಂವ ಹಾಗೂ ಹರಸೂರು ಗ್ರಾಮದಲ್ಲಿ ₹6.25 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಬಸವರಾಜ ಮತ್ತಿಮೂಡ ಶನಿವಾರ ಚಾಲನೆ ನೀಡಿದರು.
₹3.80 ಕೋಟಿ ವೆಚ್ಚದಲ್ಲಿ ಮಹಾಗಾಂವ–ಮಹಾಗಾಂವ ಕ್ರಾಸ್ ರಸ್ತೆ, ₹70 ಲಕ್ಷ ವೆಚ್ಚದಲ್ಲಿ ಮಾಳಿಂಗ ಸಿದ್ದೇಶ್ವರ ದೇವಾಲಯ ರಸ್ತೆ, ಗ್ರಾಮದ ಸಮಾನ್ಯ ಓಣಿಗಳಲ್ಲಿ ₹50 ಲಕ್ಷದ ಸಿಸಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಹರಸೂರು ಗ್ರಾಮದಲ್ಲಿ ರಸ್ತೆ ಡಾಂಬರೀಕರಣ, ಸಿಸಿ ರಸ್ತೆ ಸೇರಿದಂತೆ ₹ 1.25 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬಿಜೆಪಿ ಮುಖಂಡ ಶಿವಕುಮಾರ ಪಸಾರ, ಶಿವಾನಂದ ಪಾಟೀಲ, ಸಂಗಮೇಶ ವಾಲಿ, ಕೇದಾರ ತಡಕಲ್, ಆನಂದ ಕಣಸೂರ, ಗಿರೀಶ ಪಾಟೀಲ, ಶ್ರೀಕಾಂತ ಪಾಟೀಲ, ಕೆ.ಸಿ.ಪಾಟೀಲ, ಮಹಾದೇವ ಇದ್ದರು.
ಸ್ಪಂದಿಸದ ಪಿಡಿಒ: ಮಹಾಗಾಂವ ಗ್ರಾಮ ಪಂಚಾಯಿತಿ ಪಿಡಿಒ ಜಗದೇವಿ ಪವಾರ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಕಿಡಿ ಕಾರಿದು.
ಪಂಚಾಯಿತಿಯಲ್ಲಿ ಸಾಕಷ್ಟು ದುಡ್ಡಿದ್ದರೂ ಕುಡಿಯುವ ನೀರು, ಚರಂಡಿ, ಶೌಚಾಲಯ, ಸಿಬ್ಬಂದಿ ವೇತನ ಹೀಗೆ ಏನೇ ಕೇಳಿದರೂ ದುಡ್ಡು ಇಲ್ಲ ಎಂದು ಹೇಳುತ್ತಿದ್ದಾರೆ. 6 ತಿಂಗಳಿಗೊಮ್ಮೆ ಸಾರ್ವಜನಿಕ ಸಭೆ ಕರೆಯಬೇಕು. ಆದರೆ 2 ವರ್ಷ ಗತಿಸಿದರೂ ಕರೆದಿಲ್ಲ. 14ನೇ ಹಣಕಾಸು ಯೋಜನೆ ಲೆಕ್ಕ ಕೊಟ್ಟಿಲ್ಲ. ಕರ ವಸೂಲಿ ಲೆಕ್ಕ, ಶೌಚಾಲಯ ನಿರ್ಮಾಣ ಪಟ್ಟಿಯೂ ಕೊಡುತ್ತಿಲ್ಲ. ಮಹಾಗಾಂವ ಕ್ರಾಸ್ನಲ್ಲಿ ಶೌಚಾಲಯ ನಿರ್ಮಿಸಿ ವರ್ಷಗಳೇ ಗತಿಸಿದರೂ ಚಾಲನೆ ನೀಡಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ರೇವಮ್ಮ ಗಿರೆಪ್ಪ ಹೊಸಮನಿ ಆರೋಪಿಸಿದರು.
ಅವರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಗ್ರಾಮಸ್ಥರಾದ ಹಣಮಂತ ಹೊಸಮನಿ, ಶ್ರೀಕಾಂತ ಪಾಟೀಲ, ಮಲ್ಲಿಕಾರ್ಜುನ ಪಸಾರ, ಮಂಜುನಾಥ ಬಾಳಿ ಮತ್ತಿತರರು ಶಾಸಕರಿಗೆ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.