ಕಾಳಗಿ: ತಾಲ್ಲೂಕಿನ ಕೊಡದೂರಿನಲ್ಲಿ ಕಂಠಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ರಥೋತ್ಸವ ಜರುಗಿತು.
ಹಲಗೆ, ಡೊಳ್ಳು, ಬಾಜಾ–ಭಜಂತ್ರಿ ವಾದ್ಯ ಮೇಳಗಳ ಝೇಂಕಾರದೊಂದಿಗೆ ಹಾಶೆಟ್ಟಿ ಗೌಡರ ಮನೆಯಿಂದ ಕುಂಭದ ಮೆರವಣಿಗೆ ಆಗಮಿಸಿ ರಥಕ್ಕೆ ಪ್ರದಕ್ಷಿಣೆ ಹಾಕಿಸಲಾಯಿತು. ಭಕ್ತರು ಉತ್ತತ್ತಿ, ಫಲಪುಷ್ಪ ತೇರಿನ ಮೇಲೆ ತೂರಿ ಜೈಕಾರ ಹಾಕಿ ನಮಿಸಿದರು. ತೇರು ಎಳೆಯುತ್ತಿದ್ದಂತೆ ಮದ್ದು ಸುಡಲಾಯಿತು.
ಸಾಲಹಳ್ಳಿ, ಮಂಗಲಗಿ, ಮಳಗಿ, ರಾಜಾಪುರ, ಭರತನೂರ, ತೆಂಗಳಿ ಸೇರಿ ಇತರೆಡೆಯ ಭಕ್ತರು ಪಾಲ್ಗೊಂಡು ಕಂಠಿಬಸವೇಶ್ವರ ಮೂರ್ತಿಗೆ ಕಾಯಿ–ಕರ್ಪೂರ ಸಲ್ಲಿಸಿ ಹರಕೆ ತೀರಿಸಿದರು.
ಅಪಾರ ಭಕ್ತರು ಬೆಳಿಗ್ಗೆ ಮೀಸಲು ಮಡಿಯಿಂದ ಬಂದು ಪಲ್ಲಕ್ಕಿ ಮತ್ತು ಪುರವಂತರೊಂದಿಗೆ ಅಗ್ನಿಪ್ರವೇಶ ಮಾಡಿದರು. ಈ ಮುಂಚೆ ಜಾತ್ರೆಗೆ ಶನಿವಾರ ಚಾಲನೆ ನೀಡಲಾಯಿತು. ಅಂದಿನಿಂದ ಪ್ರತಿ ರಾತ್ರಿ ಪಲ್ಲಕ್ಕಿ ಮೆರವಣಿಗೆ ಜರುಗಿತು. ಮಂಗಳವಾರ ಕಂಠಿಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ ಮತ್ತು ಊರಿನ ಎಲ್ಲ ದೇವರಿಗೆ ಎಲೆ ಪೂಜೆ, ಮರಗಮ್ಮ ದೇವಿಗೆ ಉಡಿ ತುಂಬಿ ನೈವೇದ್ಯ ಅರ್ಪಣೆ, ಅನ್ನ ಸಂತರ್ಪಣೆ ನೆರವೇರಿಸಲಾಯಿತು. ಕಾಳಗಿ ಸಿಪಿಐ ವಿನಾಯಕ ನಾಯಕ, ಪಿಎಸ್ಐ ಹುಲೆಪ್ಪ ಗೌಡಗೊಂಡ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು. ಮುಖಂಡ ಸಿದ್ದಪ್ಪ ಪಾಟೀಲ, ಗಂಗಾಧರ ಮೈಲಾರ, ಭೀಮರಾವ ಪಾಟೀಲ, ರಮೇಶ ಕುಲಕರ್ಣಿ, ನಾಗೇಂದ್ರ ಪೇಚೆಟ್ಟಿ, ಶಿವಾನಂದ ಮಜ್ಜಗಿ, ನಾಗೇಂದ್ರ ರುದನೂರ, ಗಂಗಾಧರ ಪೇಚೆಟ್ಟಿ, ಶರಣು ಚಂದಾ, ಸಿದ್ದು ಉಡಮನಳ್ಳಿ, ಶರಣು ಮಜ್ಜಗಿ, ಬಂಡು ಗದ್ದಿ, ಲೋಕೇಶ ಕಲ್ಲೂರ, ನಾಗೇಂದ್ರ ಚಿಂದಿ, ಶಿವಕುಮಾರ ಕೊಡಸಾಲಿ, ಶಿವಶಂಕರಯ್ಯ ಸ್ಥಾವರಮಠ, ಬಸವರಾಜ ಗದ್ದಿ, ಕಂಟು ಪಾಟೀಲ, ವಿರೇಶ ಈಶ್ವರಗೊಂಡ, ಬಸವರಾಜ ಪಾಟೀಲ, ಮಲ್ಲಪ್ಪ ದಿಗ್ಗಾಂವ ಹಾಗೂ ಮಲ್ಲಪ್ಪ ಹಾಂವಗೋಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.