
ಕಲಬುರಗಿ: ‘ಕರ್ನಾಟಕವೂ ಒಂದು, ಭಾರತ ದೇಶವೂ ಒಂದು. ಇವುಗಳನ್ನು ಒಡೆಯಲು ಸಾಧ್ಯವಿಲ್ಲ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸ್ಪಷ್ಟಪಡಿಸಿದರು.
‘ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷಿಸಲಾಗಿದೆ’ ಎಂದು ಆರೋಪಿಸಿ ಕೆಲ ಜನಪ್ರತಿನಿಧಿಗಳು, ಸಂಘಟನೆಗಳು ಎತ್ತಿರುವ ಉತ್ತರ ಕರ್ನಾಟಕ ಪ್ರತ್ಯೇಕ ರಚನೆ ಕುರಿತ ಪ್ರಶ್ನೆಗೆ ನಗರದ ಐವಾನ್–ಎ–ಶಾಹಿ ಅತಿಥಿಗೃಹದಲ್ಲಿ ಶುಕ್ರವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಅಭಿವೃದ್ಧಿಯಲ್ಲಿ ತಾರತಮ್ಯವಾಗಿದ್ದರೆ, ಅದರ ಕುರಿತು ಚರ್ಚಿಸಲು ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರು ಅಧಿವೇಶನದಲ್ಲಿ ಚರ್ಚಿಸಿ ಪರಿಹಾರಕೊಂಡುಕೊಳ್ಳಬಹುದು. ಅದಕ್ಕಾಗಿಯೇ ಅಧಿವೇಶನ ನಡೆಸಲಾಗುತ್ತದೆ. ಕೆಲವರು ಪತ್ರ ಬರೆದಿದ್ದಾರೆ ಎಂದ ಮಾತ್ರಕ್ಕೆ ಅದಕ್ಕೆ ಆದ್ಯತೆ ನೀಡಬೇಕು ಎಂದೇನಿಲ್ಲ. ಇಡೀ ಕರ್ನಾಟಕ ಒಂದೇ, ಎಲ್ಲ ಕನ್ನಡಿಗರೂ ಒಗ್ಗಟ್ಟಾಗಿದ್ದೇವೆ’ ಎಂದರು.
‘ಡಿಸೆಂಬರ್ 8ರಿಂದ 19ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಸರ್ಕಾರ ಹಾಗೂ ಪ್ರತಿಪಕ್ಷಗಳು ಸಹಕರಿಸಿ, ಜನರ ಸಮಸ್ಯೆಗಳನ್ನು ಚರ್ಚಿಸುವ ವಿಶ್ವಾಸವಿದೆ. ಯಾವುದೇ ಅಧಿವೇಶನವು ಇಡೀ ರಾಜ್ಯದ ಅಭಿವೃದ್ಧಿ ಬಗೆಗೆ ಚರ್ಚಿಸುವ ವೇದಿಕೆಯಾ ಗಿರುತ್ತದೆ. ಆದರೆ, ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳ ಚರ್ಚೆಗೆ ಹೆಚ್ಚಿನ ನೀಡುತ್ತಲೇ ಬಂದಿದ್ದು, ಈಗಲೂ ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.