ADVERTISEMENT

ಕಾಶಿ ಪೀಠದ ಗುರುಕುಲ ಶತಮಾನೋತ್ಸವ ಜನವರಿ 15ರಿಂದ

18 ಭಾಷೆಗಳ ಸಿದ್ಧಾಂತ ಶಿಖಾಮಣಿಯ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಿರುವ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 15:55 IST
Last Updated 20 ಜುಲೈ 2019, 15:55 IST
ಡಾ.ಚಂದ್ರಶೇಖರ ಶಿವಾಚಾರ್ಯರು
ಡಾ.ಚಂದ್ರಶೇಖರ ಶಿವಾಚಾರ್ಯರು   

ಕಲಬುರ್ಗಿ: ಕಾಶಿಯಲ್ಲಿರುವ (ವಾರಾಣಸಿ) ಕಾಶಿ ಮಹಾಪೀಠದ ಗುರುಕುಲದ ಶತಮಾನೋತ್ಸವ ಮುಂಬರುವ ಜನವರಿ 15 ರಿಂದ ಫೆಬ್ರುವರಿ 21ರವರೆಗೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.

ನಗರದಲ್ಲಿ ಶನಿವಾರ ಈ ಮಾಹಿತಿ ನೀಡಿದ ಅವರು, ‘18 ದೇಶಿ ಹಾಗೂ ವಿದೇಶಿ ಭಾಷೆಗಳಲ್ಲಿ ಭಾಷಾಂತರಗೊಂಡ ಸಿದ್ಧಾಂತ ಶಿಖಾಮಣಿಯಮೊಬೈಲ್ ಆ್ಯಪ್ ಅನ್ನು ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.ಗುರುಕುಲ ಶತಮಾನೋತ್ಸವದಲ್ಲಿ ರಂಭಾಪುರಿ, ಉಜ್ಜಯಿನಿ, ಕೇದಾರ ಮತ್ತು ಶ್ರೀಶೈಲ ಪೀಠಗಳ ಶ್ರೀಗಳು ಸಾನ್ನಿಧ್ಯ ವಹಿಸುವರು. ವಿಶ್ವಶಾಂತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಅತಿರುದ್ರಾಭಿಷೇಕ, ಕೋಟಿ ಬಿಲ್ವಾರ್ಚನೆ, ದೀಪೋತ್ಸವ, ವಿದ್ವಾಂಸರ ಚರ್ಚಾಗೋಷ್ಠಿ, ನೂತನ ಕಟ್ಟಡಗಳ ಉದ್ಘಾಟನೆ ವಿವಿಧ ಗ್ರಂಥ ಲೋಕಾರ್ಪಣೆ, ವಿವಿಧ ಪ್ರದೇಶಗಳ ವಿವಿಧ ಕ್ಷೇತ್ರಗಳ ಸಮಾಜ ಸೇವಕರ ಸನ್ಮಾನ ವಿವಿಧ ಭಾಷೆಗಳ ವಿದ್ವಾಂಸರ ಗೌರವ ಗುರುಕುಲದಲ್ಲಿ ಅಭ್ಯಾಸ ಮಾಡಿದ ಶತಾಯುಷಿ ವಿದ್ಯಾರ್ಥಿಗಳ ಶತಮಾನೋತ್ಸವ, ಅಮೃತ ಮಹೋತ್ಸವ ಷಷ್ಠಬ್ಧಿ ಸಮಾರಂಭಗಳನ್ನು ಆಚರಿಸಲಾಗುವುದು.

‘ಈ ಸಮಾರಂಭದಲ್ಲಿ ವಿವಿಧ ಪ್ರಾಂತಗಳ ವಿವಿಧ ಪಕ್ಷಗಳ ರಾಜಕೀಯ ಧುರೀಣರು ಪಾಲ್ಗೊಳ್ಳುವರು. ಸಮಾರಂಭದ ನಿಮಿತ್ತ ಫೆಬ್ರುವರಿ 15ರಂದು ಪಂಚಪೀಠಾಧೀಶ್ವರರ ವೈಭವದ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರುವುದು. ಈ ಪಲ್ಲಕ್ಕಿ ಸೇವೆಯನ್ನು ಜೇವರ್ಗಿ ತಾಲ್ಲೂಕಿನ ಶಖಾಪುರ ತಪೋವನ ಮಠದ ಸಿದ್ಧರಾಮ ಶಿವಾಚಾರ್ಯರು ವಹಿಸಿಕೊಂಡಿದ್ದಾರೆ. ಸಮಾರಂಭಕ್ಕೆ ಬರುವ ಎಲ್ಲ ಪ್ರಾಂತಗಳ ಸದ್ಭಕ್ತರಿಗೆ ಹಾಗೂ ಗಣ್ಯರಿಗೆ ಕಾಶಿ ಮಹಾ ಪೀಠದ ಭಕ್ತ ನಿವಾಸದಲ್ಲಿ ವಸತಿ ಹಾಗೂ ಮಹಾ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದು ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.