
ಆಳಂದ: ತಾಲ್ಲೂಕಿನ ಖಜೂರಿ ಗಡಿ ಮುಖ್ಯರಸ್ತೆ ತಡೆದು ಸಂಯುಕ್ತ ರೈತ ಮೋರ್ಚಾ ತಾಲ್ಲೂಕು ಸಂಘಟನೆಯಿಂದ ರೈತರ ಈರಳ್ಳಿ, ತೊಗರಿ ಬೆಳೆ ಖರೀದಿಸಲು ಒತ್ತಾಯಿಸಿ ಸೋಮವಾರ ಪ್ರತಿಭಟನೆ ಕೈಗೊಳ್ಳಲಾಯಿತು.
ಹೋರಾಟಗಾರ ಮೌಲಾ ಮುಲ್ಲಾ ಮಾತನಾಡಿ, ‘ಎಂ.ಎಸ್.ಸ್ವಾಮಿನಾಥನ್ ಆಯೋಗದ ಪ್ರಕಾರ ರೈತರು ಬೆಳೆದ ಬೆಳೆಗೆ ಬೆಲೆ ನಿಗದಿ ಪಡೆಸಬೇಕು, ಖಜೂರಿ ವಲಯದಲ್ಲಿ ಅಧಿಕ ಪ್ರಮಾಣದಲ್ಲಿ ಈರಳ್ಳಿ ಬೆಳೆದ ರೈತರೂ ಸಂಕಷ್ಟದಲ್ಲಿದ್ದಾರೆ. ತೊಗರಿಯ ರಾಶಿ ಆರಂಭವಾಗಿದ್ದು, ಕೂಡಲೇ ಈರಳ್ಳಿ, ತೊಗರಿ ಖರೀದಿ ಕೇಂದ್ರ ತೆರೆಯಬೇಕು’ ಎಂದು ಆಗ್ರಹಿಸಿದರು.
ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ ಮೈಲಾರಿ ಜೋಗೆ, ಅಸ್ಪಾಕ್ ಮುಲ್ಲಾ ಮಾತನಾಡಿ, ತೊಗರಿ ಬೆಳೆಗೆ ಕನಿಷ್ಠ ₹10 ಸಾವಿರ ಹಾಗೂ ಈರಳ್ಳಿ ಪ್ರತಿ ಕ್ವಿಂಟಲ್ಗೆ ₹3,500 ಬೆಲೆ ನಿಗದಿ ಮಾಡಿ ಖರೀದಿಸಲು ಒತ್ತಾಯಿಸಿದರು.
ಕಮಲೇಶ ಅವಟೆ, ವೆಂಕಟ ಪೂಜಾರಿ, ಗಜಾನನ ಅವಟೆ, ತುಕಾರಾಮ ನಕಾತೆ ಉಪಸ್ಥಿತರಿದ್ದರು.
ಉಪ ತಹಶೀಲ್ದಾರ್ ಬಿ.ಜಿ.ಕುದುರಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಅರ್ಧ ಗಂಟೆ ಮುಖ್ಯರಸ್ತೆ ಮೇಲೆ ಧರಣಿ ನಡೆಸಿದ ಪರಿಣಾಮ ಗಡಿಭಾಗದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.