ADVERTISEMENT

ಬಹುಭಾಷೆಗಳ ಅರಿವಿನಿಂದ ಜ್ಞಾನ ಸಮೃದ್ಧ: ಲೇಖಕಿ ದೀಪಾ ಬಾಸ್ತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 6:22 IST
Last Updated 10 ಡಿಸೆಂಬರ್ 2025, 6:22 IST
<div class="paragraphs"><p>ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ದೀಪಾ ಭಾಸ್ತಿ ‘ಮಹಾಯಾನ’ ಕಾದಂಬರಿ ಬಿಡುಗಡೆ ಮಾಡಿದರು.&nbsp;&nbsp;</p></div>

ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ದೀಪಾ ಭಾಸ್ತಿ ‘ಮಹಾಯಾನ’ ಕಾದಂಬರಿ ಬಿಡುಗಡೆ ಮಾಡಿದರು.  

   

ಕಲಬುರಗಿ: ‘ಯುವಜನರಿಗೆ ಬಹುಭಾಷೆಗಳ ಅರಿವು ಅಗತ್ಯ. ಅದರಿಂದ ವೈವಿಧ್ಯಮಯ ಜ್ಞಾನ, ವಿಭಿನ್ನ ಆಲೋಚನೆ, ಒಳಗಣ್ಣು, ಆಳವಾದ ದೃಷ್ಟಿಕೋನ ಹೊಂದಲು ಸಾಧ್ಯ’ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ದೀಪಾ ಭಾಸ್ತಿ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಮಂಗಳವಾರ ಬೆಂಗಳೂರಿನ ಸಪ್ನ ಬುಕ್‌ ಹೌಸ್‌ ಹಾಗೂ ಕಲಬುರಗಿಯ ಕುಟುಂಬ ಪ್ರಕಾಶನ ಆಯೋಜಿಸಿದ್ದ ಪ್ರೊ.ಎಚ್‌.ಟಿ. ಪೋತೆ ರಚಿಸಿದ ಡಾ.ಬಿ.ಆರ್‌.ಅಂಬೇಡ್ಕರ್‌ ಜೀವನ ಕಥನ ಕುರಿತ ‘ಮಹಾಯಾನ’ ಕಾದಂಬರಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಬರೀ ಕನ್ನಡ ಇಲ್ಲವೇ ಬರೀ ಇಂಗ್ಲಿಷ್‌ ಕಲಿತರೆ ಸಿಗುವ ಜ್ಞಾನಕ್ಕಿಂತಲೂ ಬಹುಭಾಷಾ ಕಲಿಕೆಯಿಂದ ಸಿಗುವ ಜ್ಞಾನ ಮಿಗಿಲು. ಆದರೆ, ನಾವೆಲ್ಲ ಇಂಗ್ಲಿಷ್‌ ಭಾಷೆಯ ಬೆನ್ನತ್ತಿ ಬಹುಭಾಷಾ ಸಂಸ್ಕೃತಿ ಕಳೆದುಕೊಳ್ಳುತ್ತಿದ್ದೇವೆ. ಬೆಂಗಳೂರಿನಲ್ಲಿ ಇಂಗ್ಲಿಷೇ ನಮ್ಮ ತಾಯ್ನುಡಿ ಎಂದು ಹೆಮ್ಮೆಯಿಂದ ಹೇಳುವ ಸ್ಥಿತಿಯಿದೆ. ಅದು ನಮ್ಮ ಬೇರುಗಳಿಂದ ನಾವೇ ಕಳಚಿಕೊಂಡಂತೆ. ಬೇರೇ ಇಲ್ಲದಿದ್ದರೆ ನಾವು ಸೃಷ್ಟಿಸುವ ಸಾಹಿತ್ಯ, ಕಲೆಯ ಮೌಲ್ಯ ಸಹಜವಾಗಿಯೇ ಕಡಿಮೆಯಾಗುತ್ತದೆ’ ಎಂದರು.

‘ಅನುವಾದ ವಿಶ್ವದ ಹಲವು ಭಾಷೆಗಳ ಲೇಖಕರ ಸಾಹಿತ್ಯ, ಜ್ಞಾನ ನಮಗೆ ತೆರೆದಿಡುತ್ತದೆ. ಡಾ.ಬಿ.ಆರ್‌.ಅಂಬೇಡ್ಕರ್‌ ವಿಚಾರಗಳು ಕೂಡ ಅನುವಾದ ಮೂಲಕವೇ ನಮಗೆ ದಕ್ಕಿವೆ’ ಎಂದರು.

‘ಅನುವಾದ ಸುಲಭವಲ್ಲ. ಸಾಹಿತ್ಯದಲ್ಲಿ ಯಾವುದೇ ಪದದ ಅರ್ಥವನ್ನೂ ಮೀರಿ, ಅದರ ಹಿಂದಿನ ಭಾವ, ಮೌನವನ್ನೂ ಅನುವಾದಿಸಬೇಕಾಗುತ್ತದೆ. ಭಾಷೆ ಎಂದರೆ ನಮ್ಮ ಸಂಸ್ಕೃತಿಯ ಜೊತೆಗೆ ನೆನಪುಗಳು, ಸಾಮಾಜಿಕ ಚೌಕಟ್ಟು, ರಾಜಕೀಯ ದೃಷ್ಟಿಕೋನ, ಆಹಾರ ಪದ್ಧತಿ, ಪೂರ್ವಜರ ನೆನಪುಗಳು, ಭೌಗೋಳಿಕ ಅಂಶಗಳೆಲ್ಲವನ್ನೂ ಅನುವಾದದಲ್ಲಿ ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಇಂಥ ಅನುವಾದ ಕೃತಕ ಬುದ್ಧಿ ಮಾಡಲು ಸದ್ಯಕ್ಕಂತೂ ಸಾಧ್ಯವಿಲ್ಲ’ ಎಂದರು.

ಕೃತಿ ಕುರಿತು ಮಾತನಾಡಿದ ವಿಮರ್ಶಕ ಎಸ್‌.ಆರ್‌.ವಿಜಯಶಂಕರ, ‘ಮಹಾಯಾನ ಕೃತಿಯು ಬಾಬಾಸಾಹೇಬರ ಹುಟ್ಟಿನಿಂದ ಅವರು ಬೌದ್ಧ ಧರ್ಮ ಸ್ವೀಕರಿಸುವ ತನಕದ ಪಯಣ ಒಳಗೊಂಡಿದೆ. ಇದರಲ್ಲಿ ಯಾವ ಪುಟ ಬಿಡಿಸಿದರೂ ಭಾರತದ ಸಾಮಾಜಿಕ ಚರಿತ್ರೆ, ದೇಶದ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಜೊತೆಗೆ ಅಂಬೇಡ್ಕರ್ ಕಥನವನ್ನೂ ಅರಿಯಬಹುದು. ಇದು ಭಾರತೀಯ ನಿಮ್ನ ವರ್ಗಗಳ ಹೋರಾಟದ ಕಥನವೂ ಆಗಿದೆ’ ಎಂದರು.

ಕುಲಸಚಿವ ಪ್ರೊ.ರಮೇಶ ಲಂಡನಕರ್, ದಲಿತ ಮುಖಂಡ ಡಿ.ಜಿ.ಸಾಗರ, ಸಪ್ನ ಬುಕ್‌ ಹೌಸ್‌ ಕಲಬುರಗಿಯ ಮ್ಯಾನೇಜರ್‌ ಮಹಾಂತೇಶ ಮಠ ವೇದಿಕೆಯಲ್ಲಿದ್ದರು. 

ಕೃತಿ ಪರಿಚಯ: ಮಹಾಯಾನ ಕಾದಂಬರಿಯನ್ನು ಬೆಂಗಳೂರಿನ ಸಪ್ನ ಬುಕ್‌ ಹೌಸ್‌ ಪ್ರಕಟಿಸಿದೆ. 683 ಪುಟಗಳನ್ನು ಹೊಂದಿರುವ ಕೃತಿ ಬೆಲೆ ₹750.

ಬರೀ ವ್ಯಕ್ತಿಯ ವಿವರ ಕೊಡದೇ ಆ ವ್ಯಕ್ತಿಯ ಆಳವಾದ ಚೈತನ್ಯ ನೈತಿಕ ಚಡಪಡಿಕೆ ತಲ್ಲಣಗಳ ಹಿಡಿದಿಡುವುದು ಒಳ್ಳೇ ಕಾದಂಬರಿಯ ಗುಣ. ಚರಿತ್ರೆಯ ಪ್ರತಿಧ್ವನಿಯುಳ್ಳ ಮಹಾಯಾನಕ್ಕೆ ಆ ಗುಣವಿದೆ
ವಿಕ್ರಮ ವಿಸಾಜಿ ಕರ್ನಾಟಕ ಕೇಂದ್ರೀಯ ವಿವಿ ಪ್ರಾಧ್ಯಾಪಕ
ಬಾಹ್ಯಾಕಾಶದಲ್ಲಿ ಏನೆಲ್ಲ ಸಾಧಿಸಿದರೂ ದೇಶದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಸಮಾನತೆ ಗೌರವದ ಬದುಕು ಸಿಕ್ಕಾಗಲೇ ಭಾರತ ನೈಜ ಪ್ರಗತಿ ಕಾಣುತ್ತದೆ
ಪ್ರೊ.ಶಶಿಕಾಂತ ಉಡಿಕೇರಿ ಗುಲಬರ್ಗಾ ವಿವಿ ಕುಲಪತಿ
‘ಸ್ತ್ರೀ ಸಬಲೀಕರಣ ತುಡಿತ’
‘ಸಂವಿಧಾನದಲ್ಲಿರುವ ಮಹಿಳಾ ಸಬಲೀಕರಣದ ಆಶಯಗಳು ಎಲ್ಲಿಯವರೆಗೂ ಈಡೇರುವುದಿಲ್ಲವೋ ಅಲ್ಲಿಯ ತನಕವೂ ಡಾ.ಬಿ.ಆರ್‌.ಅಂಬೇಡ್ಕರ್‌ ವಿಚಾರಗಳು ಪ್ರಸ್ತುತವಾಗಿರುತ್ತವೆ’ ಎಂದು ಲೇಖಕಿ ದೀಪಾ ಭಾಸ್ತಿ ಹೇಳಿದರು. ‘ಮಹಿಳೆಯರ ಬಗೆಗೆ ಡಾ.ಬಿ.ಆರ್‌.ಅಂಬೇಡ್ಕರ್ ಅತ್ಯಂತ ಅತ್ಯಾಧುನಿಕ ಅನಿಸಿಕೆಗಳು ಪ್ರಗತಿಪರ ವಿಚಾರಗಳನ್ನು ಹೊಂದಿದ್ದರು. ಮಹಿಳೆಯರ ಸಾಮಾಜಿಕ ಶೈಕ್ಷಣಿಕ ಆರ್ಥಿಕ ರಾಜಕೀಯ ಸಮಾನತೆ ವಿಚಾರಗಳು ಇಂದೆಲ್ಲ ಪ್ರಗತಿಪರ ಎನಿಸುತ್ತವೆ. ಆದರೆ ಹಲವು ದಶಕಗಳಿಗೂ ಮುನ್ನವೇ ಡಾ.ಅಂಬೇಡ್ಕರ್ ಇವುಗಳನ್ನು ಹೇಳಿದ್ದಾರೆ’ ಎಂದರು.
‘ನಿತ್ಯವೂ ಅಪಮಾನ ತಪ್ಪಿಲ್ಲ...’
‘ಜಾತಿ ಕಾರಣಕ್ಕೆ ಬದುಕಿನಲ್ಲಿ ಇಂದಿಗೂ ಅವಮಾನ ತಪ್ಪಿಲ್ಲ’ ಎಂದು ಮಹಾಯಾನ ಕೃತಿಯ ಲೇಖಕ ಪ್ರೊ.ಎಚ್.ಟಿ.ಪೋತೆ ವಿಷಾದಿಸಿದರು. ‘ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂಬ ಕುವೆಂಪು ಮಾತಿನಂತೆ ನಾನು ಬದುಕಲು ಪ್ರಯತ್ನಿಸಿದೆ. ಬುದ್ಧ ಬಸವ ಅಂಬೇಡ್ಕರ್‌ ಅವರನ್ನು ಪಡೆದುಕೊಂಡರೆ ಬದುಕಿನಲ್ಲಿ ಅಪಮಾನ ಕಳೆದುಕೊಳ್ಳಲು ಸಾಧ್ಯವಿದೆ. ಆದರೆ ಯುವಪೀಳಿಗೆಯಲ್ಲಿ ಯಾರೊಬ್ಬರೂ ಅಂಬೇಡ್ಕರ್ ಅವರನ್ನು ಓದದಿರುವುದು ದುರದೃಷ್ಟಕರ’ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.