ADVERTISEMENT

‘ಕುವೆಂಪು ಕೃತಿಗಳಲ್ಲಿ ಸಮಗ್ರತೆ ಅನುಭೂತಿ’

ಕನ್ನಡ ಕ್ರಿಯಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವ.ಚ. ಚನ್ನೇಗೌಡ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 12:29 IST
Last Updated 29 ಡಿಸೆಂಬರ್ 2020, 12:29 IST
ರಾಷ್ಟ್ರಕವಿ ಕುವೆಂಪು ಮತ್ತು ಗಾಯಕ ದಿ. ಸಿ. ಅಶ್ವಥ್ ಅವರ ಜನ್ಮ ದಿನ ಕಾರ್ಯಕ್ರಮಕ್ಕೆ ವ.ಚ. ಚನ್ನೇಗೌಡ (ಮಧ್ಯದಲ್ಲಿರುವವರು) ಚಾಲನೆ ನೀಡಿದರು. ಮಂಜುನಾಥ ನಾಲವಾರಕರ್, ಶಿವಶಾಂತರೆಡ್ಡಿ ಇತರರು ಇದ್ದರು
ರಾಷ್ಟ್ರಕವಿ ಕುವೆಂಪು ಮತ್ತು ಗಾಯಕ ದಿ. ಸಿ. ಅಶ್ವಥ್ ಅವರ ಜನ್ಮ ದಿನ ಕಾರ್ಯಕ್ರಮಕ್ಕೆ ವ.ಚ. ಚನ್ನೇಗೌಡ (ಮಧ್ಯದಲ್ಲಿರುವವರು) ಚಾಲನೆ ನೀಡಿದರು. ಮಂಜುನಾಥ ನಾಲವಾರಕರ್, ಶಿವಶಾಂತರೆಡ್ಡಿ ಇತರರು ಇದ್ದರು   

ಕಲಬುರ್ಗಿ: ಕನ್ನಡ ಸಾರಸ್ವತ ಲೋಕಕ್ಕೆ ಕುವೆಂಪು ಅವರು ಯಥೇಚ್ಛ ಸಾಹಿತ್ಯ ಭಂಡಾರವನ್ನೇ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಅವರ ಕೃತಿಗಳನ್ನು ಓದಿದರೆ 20ನೇ ಶತಮಾನದ ಸಾಹಿತ್ಯವನ್ನೆಲ್ಲ ಓದಿದಂತಹ ಅನುಭೂತಿಯಾಗುತ್ತದೆ ಎಂದು ಕನ್ನಡ ಕ್ರಿಯಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವ.ಚ. ಚನ್ನೇಗೌಡ ಬಣ್ಣಿಸಿದರು.

ನಗರದ ಸರ್ವಜ್ಞ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ ಬಣ) ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಮತ್ತು ಗಾಯಕ ದಿ. ಸಿ. ಅಶ್ವಥ್ ಅವರ ಜನ್ಮ ದಿನದ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ, ಕೃಷಿ, ಮಹಿಳೆ, ಶೂದ್ರ ಇನ್ನಿತರ ಆಯಾಮಗಳನ್ನು ಒಳಗೊಂಡ ಕಾದಂಬರಿ, ನಾಟಕ, ಶಿಶು ಸಾಹಿತ್ಯ, ಕವನ ಸಂಕಲನ ಹೀಗೆ ಸಾಹಿತ್ಯದ ಎಲ್ಲ ನೆಲೆಗಳನ್ನು ಕುವೆಂಪು ಅವರ ಕೃತಿಗಳಲ್ಲಿ ಕಾಣಬಹುದಾಗಿದೆ ಎಂದರು.

ADVERTISEMENT

ಶೂದ್ರ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿ, ಕನ್ನಡದ ಅಸ್ಮಿತೆಯನ್ನು ನಮ್ಮೆಲ್ಲರಿಗೆ ತೋರಿಸಿಕೊಟ್ಟ ನಾಡಿನ ಶ್ರೇಷ್ಠ ಕವಿ ಕುವೆಂಪು. ಮೇಲು, ಕೀಳು ಎಂಬ ಅಸಮಾನತೆಯನ್ನು ತೊಲಗಿಸಿ ಎಲ್ಲರೂ ಸಮಾನರೆಂಬ ಭಾವನೆಯನ್ನು ಅವರ ಕೃತಿಗಳಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.

‘ಯಾವ ಭಾಷೆಯ ಮೇಲೆಯೂ ದ್ವೇಷವಿಲ್ಲ. ಭಾಷೆಯನ್ನು ಎಲ್ಲರೂ ಗೌರವಿಸಬೇಕು. ಆದರೆ ದಕ್ಷಿಣ ಭಾರತದ ಮೇಲೆ ಹಿಂದಿ ಭಾಷೆಯನ್ನು ಬಲವಂತದಿಂದ ಹೇರಿ ನಮ್ಮ ಪ್ರಾದೇಶಿಕ ಭಾಷೆಗಳ ಅಳಿವಿಗೆ ಸಂಚು ನಡೆಸುತ್ತಿರುವರೆಂಬ ಭಯ, ಆತಂಕ ನಮ್ಮನ್ನು ಕಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ನಾಲವಾರಕರ್ ಮಾತನಾಡಿ, ಕುವೆಂಪು ಅವರು ನೀಡಿದ ಸರ್ವೋದಯ, ಸಮನ್ವಯ, ವಿಶ್ವಮಾನವನ ಸಂದೇಶ ಜಾಗತಿಕ ವೇದಿಕೆಯಲ್ಲಿ ಬೃಹತ್‌ ಮಟ್ಟದಲ್ಲಿ ಪರಿಣಾಮ ಮೂಡಿಸಿವೆ. ಕುವೆಂಪು ಅವರ ದೈಹಿಕ ಚಿತ್ರಣ ನೋಡಲು ಆಗದು. ಆದರೆ ಅವರಿಗೆ ಸ್ಫೂರ್ತಿ ನೀಡಿದ ಊರು, ಬೆಟ್ಟ–ಗುಡ್ಡ, ಕಾಡು, ಪರಿಸರವನ್ನು ನೋಡಿ ಮತ್ತು ಅವರ ಸಾಹಿತ್ಯವನ್ನು ಓದಿ ಅವರನ್ನು ಅರ್ಥೈಸಿಕೊಳ್ಳಬೇಕು’ ಎಂದರು.

ಹಿರಿಯ ಸಾಹಿತಿ ಶಿವಶಾಂತರೆಡ್ಡಿ ಕುವೆಂಪು ವ್ಯಕ್ತಿತ್ವವನ್ನು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಸಾಹಿತಿ, ಪತ್ರಕರ್ತರಿಗೆ ಕುವೆಂಪು ಪ್ರಶಸ್ತಿ ಹಾಗೂ ಗಾಯಕ ಸಿ.ಅಶ್ವಥ್ ಅವರ ಸವಿ ನೆನಪಿಗಾಗಿ ಗಾಯಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯ ಮೇಲೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕ್ರಿಯಾ ಸಮಿತಿ ಅಧ್ಯಕ್ಷ ರೆಹಮಾನ್ ಮಸ್ಕಿ, ವಿಭಾಗ 1ರ ಕ್ರಿಯಾ ಸಮಿತಿ ಅಧ್ಯಕ್ಷ ವಿಠ್ಠಲ್ ಭೀಮನ್, ಕಾಲೇಜಿನ ಪ್ರಾಂಶುಪಾಲ ಎಂ.ಸಿ. ಕಿರದಳ್ಳಿ ಇದ್ದರು.

ಕರವೇ ಪದಾಧಿಕಾರಿಗಳಾದ ಚರಣರಾಜ ರಾಠೋಡ, ಪ್ರಲ್ಹಾದ್ ಹಡಗಿಲಕರ್, ನಾಗರಾಜ ಮಡಿವಾಳ, ಯಲ್ಲಯ್ಯ ಗುತ್ತೇದಾರ, ನಿಸಾರ್ ಅಹ್ಮದ್, ಕವೀನ್ ನಾಟೀಕಾರ ಇನ್ನಿತರರಿದ್ದರು.

ಇದೇ ವೇಳೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು ಹೊರತಂದ ಮಹಿಳಾ ಧ್ವನಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.