ಅಫಜಲಪುರ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಪ್ಪಿಸುವ ಸಲುವಾಗಿ ತಾಲ್ಲೂಕಿನ 18 ಕೆರೆಗಳಿಗೆ ಭೀಮಾನದಿಯಿಂದ ನೀರು ತುಂಬುವ ಯೋಜನೆ ಮಂಜೂರಾಗಿದ್ದು, ಅದಕ್ಕಾಗಿ ₹376 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು.
ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಶುಕ್ರವಾರ ಕೆರೆ ತುಂಬುವ ಯೋಜನೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ಭೀಮಾನದಿಯಿಂದ ಅಮರ್ಜಾ ಜಲಾಶಯಕ್ಕೆ ನೀರು ತುಂಬುವ ಮೂಲಕ ತಾಲ್ಲೂಕಿನ 11 ಕೆರೆಗಳಿಗೆ ನೀರು ತುಂಬುವ ಕಾಮಗಾರಿ ಆರಮಭಗೊಂಡಿದೆ ಎಂದು ತಿಳಿಸಿದರು.
ಮಾಶಾಳದಲ್ಲಿ ವಿವಿಧ ಕಾಮಗಾರಿ ಗಳಿಗೆ ₹9.54 ಕೋಟಿ ಮಂಜೂರಾಗಿದೆ. ಫರತಾಬಾದ್ ವಲಯದ ಹರವಳ ಹತ್ತಿರ ಭೀಮಾನದಿಗೆ ₹122 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ಕಾಮಗಾರಿ ಆರಂಭವಾಗಲಿದೆ. ಹಾಗರಗುಂಡಿಯಲ್ಲಿ ₹11 ಕೋಟಿ ವೆಚ್ಚದಲ್ಲಿ ಕೆರೆ ತುಂಬುವ ಆರಂಭವಾಗಲಿದೆ. ಈ ಎಲ್ಲ ಕಾಮಗಾರಿಗಳಿಗೆ ಜನರ ಸಹಕಾರ ಅಗತ್ಯವಾಗಿದೆ ಎಂದರು.
ಸಮಾಜ ಸೇವಕ ಜೆ.ಎಂ.ಕೊರಬು ಮಾತನಾಡಿ, ಮಾಶಾಳದಲ್ಲಿ ಕೆರೆ ತುಂಬುವ ಯೋಜನೆ ಆರಂಭಿಸಿರುವುದು ಉತ್ತಮ ಕಾರ್ಯ. ಉಡಚಾಣದಿಂದ ಮಾಶಾಳ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ₹7 ಕೋಟಿ ಖರ್ಚಾಗಿದೆ. ಆದರೆ ಗ್ರಾಮಕ್ಕೆ ನೀರು ತಲುಪಿಲ್ಲ. ಇದರ ಬಗ್ಗೆ ಶಾಸಕರು ಪರಿಶೀಲಿಸಬೇಕು ಎಂದರು.
ಜಿ.ಪಂ ಸದಸ್ಯರಾದ ಅರುಣ ಕುಮಾರ ಪಾಟೀಲ, ಭೋರಮ್ಮ ಕರೂಟಿ, ಕೇದಾರ ಶ್ರೀ, ತಾ.ಪಂ ಅಧ್ಯಕ್ಷೆ ರುಕ್ಮಿಣಿ ಹೊನ್ನಕೇರಿ, ಸದಸ್ಯರಾಜಕುಮಾರ ಬಬಲಾದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಲಾಬಾಯಿ ದೊಡ್ಡಪ್ಪ, ಉಪಾಧ್ಯಕ್ಷೆ ಶರಿಫಾಬಿ ಪಠಾಣ, ಪ್ರಮುಖರಾದ ರಾಜೇಂದ್ರಗೌಡ ಪಾಟೀಲ, ಮಹಾದೇವಗೌಡ, ತುಕಾರಾಮಗೌಡ ಪಾಟೀಲ, ಬಾಬಾಸಾಹೇಬ ಪಾಟೀಲ, ಮಹಾಂತೇಶ, ಪಪ್ಪು ಪಟೇಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.