ADVERTISEMENT

ಸಾಲೇಬೀರನಹಳ್ಳಿ ಸಣ್ಣ ನೀರಾವರಿ ಕೆರೆ ನೀರು ವ್ಯರ್ಥ ಪೋಲು; ಕೆರೆ ಖಾಲಿ

ಗೇಟ್‌ ದುರಸ್ತಿಯ ಮಾಡದ ಕಾರಣ ಕೆರೆ ಖಾಲಿ ನೀರಿಗಿಲ್ಲ ಬೆಲೆ!

ಜಗನ್ನಾಥ ಡಿ.ಶೇರಿಕಾರ
Published 23 ಜೂನ್ 2018, 16:02 IST
Last Updated 23 ಜೂನ್ 2018, 16:02 IST
ಚಿಂಚೋಳಿ ತಾಲ್ಲೂಕು ಸಾಲೇಬೀರನಹಳ್ಳಿ ಕೆರೆ ನೀರು ಕಾಲುವೆ ಬಂದ್‌ ಮಾಡಿ ತೊರೆಗೆ ಹರಿಸುತ್ತಿರುವುದು
ಚಿಂಚೋಳಿ ತಾಲ್ಲೂಕು ಸಾಲೇಬೀರನಹಳ್ಳಿ ಕೆರೆ ನೀರು ಕಾಲುವೆ ಬಂದ್‌ ಮಾಡಿ ತೊರೆಗೆ ಹರಿಸುತ್ತಿರುವುದು   

ಚಿಂಚೋಳಿ: ಸಣ್ಣ ನೀರಾವರಿ ಇಲಾಖೆಯ ರಾಜ್ಯದ ಅತಿದೊಡ್ಡ ಕೆರೆ ಎಂಬ ಖ್ಯಾತಿ ಹೊಂದಿರುವ ತಾಲ್ಲೂಕಿನ ಸಾಲೇಬೀರನಹಳ್ಳಿ ಕೆರೆಯ ಗೇಟುಗಳ ದುರಸ್ತಿ ಮಾಡದ ಕೆರೆಯ ನೀರು ಪೋಲಾಗುತ್ತಿರುವುದು ಬೆಳಕಿಗೆ ಬಂದಿದೆ.


ಅಧಿಕಾರಿಗಳ ನಿರ್ಲಕ್ಷದಿಂದ ಕೆರೆಯ ನೀರು ಸಂಗ್ರಹಣೆ ಸಾಧ್ಯವಾಗದ ಕಾರಣ ಕೆರೆಗೆ ಹರಿದು ಬಂದ ನೀರು ವ್ಯರ್ಥ ತೊರೆಗೆ ಬಿಡಲಾಗುತ್ತಿದೆ ಎಂದು ರೈತರು ದೂರಿದ್ದಾರೆ.

ಸುಮಾರು 5ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಪ್ರತಿಷ್ಠಿತ ಕೆರೆಯ ಬಲದಂಡೆ ನಾಲೆ 9 ಕಿ.ಮೀ, ಎಡದಂಡೆ ನಾಲೆ 6 ಕಿ.ಮೀ ಉದ್ದವಿದ್ದು, ಬಂಡ್ 30 ಮೀಟರ್‌ ಎತ್ತರವಿದೆ. 1990ರ ದಶಕದಲ್ಲಿ ವಿಶ್ವಬ್ಯಾಂಕ್‌ ನೆರವಿನಿಂದ ನಿರ್ಮಾಣಗೊಂಡ ಕೆರೆ ಎರಡು ಕಾಲುವೆಗಳ ಗೇಟುಗಳ ದುರಸ್ತಿ ಮಾಡಿಸಿಲ್ಲ ಎಂದು ರೈತರು ದೂರುತ್ತಾರೆ.

ADVERTISEMENT

ಬೇಸಿಗೆಯಲ್ಲಿ ಕೈಕಟ್ಟಿಕುಳಿತ ಅಧಿಕಾರಿಗಳು ಮಳೆಗಾಲ ಆರಂಭವಾದ ಗೇಟುಗಳ ದುರಸ್ತಿಗಾಗಿ ಮುಂದಾಗಿದ್ದರಿಂದಲೇ ಕೆರೆ ನೀರಿಲ್ಲದೇ ಖಾಲಿಯಾಗುವಂತಾಗಿದೆ. ಇಷ್ಟುದಿನಗಳ ಕಾಲ ಮಳೆ ನೀರು ಗೇಟುಗಳಿಂದ ಕಾಲುವೆಗಳಲ್ಲಿ ಹರಿದು ಪೋಲಾಗುತ್ತಿತ್ತು. ರೈತರ ಜಮೀನುಗಳಲ್ಲಿ ಬಿತ್ತನೆ ಮುಗಿದಿದ್ದು ಬೆಳೆಗಳು ಹಾಳಾಗುವುದರಿಮದ ರೈತರು ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಎಂಜಿನಿಯರ್‌ಗಳು ನಾಲೆಯಲ್ಲಿ ಹರಿಯುವ ನೀರು ಅಡ್ಡಗಟ್ಟಲು ಮಣ್ಣು ತಂದು ಹಾಕಿ ಕಾಲುವೆ ಬಂದ್‌ ಮಾಡಿದ್ದಾರೆ. ನೀರು ತಿರುಗಿಸಿ ತೊರೆ(ಹಳ್ಳಕ್ಕೆ)ಗೆ ಸೇರುವಂತೆ ಮಾಡಲು ಕಾಕುವೆ ಒಡೆದಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಕಳೆದ ಮೇ ಕೊನೆಯ ವಾರ ಹಾಗೂ ಜೂನ್‌ ಮೊದಲವಾರದಲ್ಲಿ ಸಾಲೇಬೀರನಹಳ್ಳಿ ಸುತ್ತಲೂ ಮತ್ತು ನೆರೆಯ ಹುಮ್ನಾಬಾದ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದೆ. ಇದರಿಂದ ಕೆರೆಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿದೆ. ಆದರೆ ನೀರಿನ ಮಹತ್ವದ ಅರಿವಿಲ್ಲದ ಎಂಜಿನಿಯರ್‌ಗಳು ನೀರು ವ್ಯರ್ಥ ಪೋಲಾಗಲು ಕಾರಣರಾಗಿದ್ದಾರೆ ಎಂದು ದೂರುತ್ತಾರೆ, ರೈತ ಮುಖಂಡ ವಿಶ್ವನಾಥರೆಡ್ಡಿ ಶೇರಿಕಾರ.

ಕಳೆದ ವರ್ಷವೂ ಕೆರೆಯ ಗೇಟುಗಳಲ್ಲಿ ಸೋರಿಕೆಯಿತ್ತು ಆದರೆ ಅಧಿಕಾರಿಗಳು ಶ್ರಮವಹಿಸಿ ಕಾಳಜಿಯಿಂದ ಕೆಲಸ ಮಾಡಿದ್ದರಿಂದ ನೀರು ಸಂಗ್ರಹಿಸಿದ್ದರು. ಇಲಾಖೆಯ ಮೇಲಧಿಕಾರಿಗಳು ಖುರ್ಚಿಗೆ ಭಾರವಾಗದೇ ಕೆರೆಗಳ ದುಸ್ಥಿತಿ ಬಗ್ಗೆ ವರದಿ ಪಡೆದುಕೊಂಡು ಸಕಾಲದಲ್ಲಿ ದುರಸ್ತಿ ಮಾಡಿಸಬೇಕಿತ್ತು ಇದಕ್ಕೆ ಅವರಿಗೆ ಪುರುಸೊತ್ತಿಲ್ಲವಲ್ಲ ಎಂಬ ಆರೋಪ ಕೇಳಿ ಬಂದಿದೆ. ಮುಂಗಾರು ಬೇಗ ಆರಸಭವಾಗಿದ್ದರಿಂದ ಈಗಾಗಲೇ 4/5 ಮೀಟರ್‌ ನೀರು ಸಂಗ್ರಹವಾಗುತ್ತಿತ್ತು ಆದರೆ ಗೇಟು ದುರಸ್ತಿಗೆ ವಿಳಂಬ ಮಾಡಿದ್ದರಿಂದ ನೀರು ವ್ಯರ್ಥವಾಗುತ್ತಿದೆ.


ಗೇಟು ದುರಸ್ತಿ ಮಾಡಲಾಗಿದೆ. ನೀರು ವ್ಯರ್ಥ ಪೋಲಾಗುವುದು ನಿಲ್ಲಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಚಿಂಚೋಳಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿವಶರಣಪ್ಪ ಕೇಶ್ವಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.