ಗುರುಮಠಕಲ್: ಹತ್ತಿರದ ಚಂಡ್ರಿಕಿ ಗ್ರಾಮದ ಹೊರವಲಯದಲ್ಲಿ ಶನಿವಾರ ರಾತ್ರಿ ವೇಳೆ ಪೊಲೀಸ್ ಬೀಟ್ ವೇಳೆ ಪಿಐ ದೌಲತ್ ಎನ್.ಕುರಿ ಅವರು ವಾಹನದಲ್ಲಿ ಗಸ್ತಿಗೆ ತೆರಳಿದ ವೇಳೆ ಚಿರತೆ ಕಾಣಿಸಿದೆ.
ಚಿರತೆ ಸಂಚಾರದ ಕುರಿತು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಭಾನುವಾರ ಹೆಜ್ಜೆ ಗುರುತುಗಳ ಆಧಾರದಲ್ಲಿ ಚಿರತೆ ಸಂಚಾರ ಖಚಿತಪಡಿಸಿದ್ದು, ಸುತ್ತಲಿನ ಗ್ರಾಮಗಳ ರೈತರು, ಪ್ರಯಾಣಿಕರು ಜಾಗರೂಕತೆ ವಹಿಸಲು ಪೊಲೀಸ್ ಸಿಬ್ಬಂದಿ ಕೋರಿದ್ದಾರೆ.
ಎರಡು ವರ್ಷಗಳ ಹಿಂದೆ ಹತ್ತಿರದ ಮಿನಾಸಪುರ ಗ್ರಾಮದ ಕೆರೆಯ ಹತ್ತಿರ ಮೀನಿಗೆ ಆಹಾರ ನೀಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಘಟನೆಯ ನಂತರ ಈಗ ಚಂಡ್ರಿಕಿ ಹೊರವಲಯದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ತಾಲ್ಲೂಕಿನಲ್ಲಿ ಚಿರತೆ ಸಂಚಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ, ಎಚ್ಚರಿಕೆ ಸಂದೇಶಗಳು ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.