ADVERTISEMENT

ಚಿಂಚೋಳಿ: ಜನಸಂಚಾರ ವಿರಳ, ಭಣಗುಟ್ಟಿದ ರಸ್ತೆಗಳು

ತಾಲ್ಲೂಕು ಕೇಂದ್ರಗಳಲ್ಲೂ ಲಾಕ್‌ಡೌನ್‌ ಪರಿಣಾಮಕಾರಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 4:35 IST
Last Updated 30 ಏಪ್ರಿಲ್ 2021, 4:35 IST
ಚಿಂಚೋಳಿಯ ಮುಖ್ಯರಸ್ತೆಯಲ್ಲಿರುವ ಅಂಗಡಿ ಮುಂಗಟ್ಟು ಸಂಪೂರ್ಣ ಮುಚ್ಚಿರುವುದು
ಚಿಂಚೋಳಿಯ ಮುಖ್ಯರಸ್ತೆಯಲ್ಲಿರುವ ಅಂಗಡಿ ಮುಂಗಟ್ಟು ಸಂಪೂರ್ಣ ಮುಚ್ಚಿರುವುದು   

ಚಿಂಚೋಳಿ: ಕರ್ಫ್ಯೂ ಕಾರಣ ಎರಡನೇ ದಿನವೂ ಚಿಂಚೋಳಿಯ ಪಟ್ಟಣದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬೆಳಿಗ್ಗೆ 10ಗಂಟೆವರೆಗೆ ಹಾಲು, ಹಣ್ಣು, ತರಕಾರಿ ಮತ್ತು ದಿನಸಿ ಅಂಗಡಿಗಳಿಗೆ ರಿಯಾಯಿತಿ ನೀಡಿದ್ದರಿಂದ ಬೆಳಿಗ್ಗೆ ಅಲ್ಲಲ್ಲಿ ಜನರ ಸಂಚಾರ ಕಾಣಿಸಿತು. ಆದರೆ ಬೆಳಿಗ್ಗೆ 11ರಿಂದ ಪಟ್ಟಣದ ರಸ್ತೆಗಳು ವಾಹನಗಳ ಓಡಾಟ, ಜನರ ಸಂಚಾರ ವಿಲ್ಲದೇ ಭಣಗುಟ್ಟಿದವು.

ಚಿಂಚೋಳಿಯ ಮತ್ತು ಚಂದಾಪುರದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಗಳಲ್ಲಿ ಗ್ರಾಹಕರು ಕಾಣಿಸಲಿಲ್ಲ. ಬೆರಳೆಣಿಕೆಯಷ್ಟು ಗ್ರಾಹಕರು ಬ್ಯಾಂಕಿನಲ್ಲಿ ಗೋಚರಿಸಿದರು.

ಬಸ್‌ ನಿಲ್ದಾಣ, ನ್ಯಾಯಾಲಯದ ಎದುರು ಮುಖ್ಯರಸ್ತೆಯಲ್ಲಿ ತೆರೆದ ಕೋವಿಡ್ ಸಹಾಯ ಕೇಂದ್ರಗಳಿಗೂ ಜನರು ಬರದೇ ಸಿಬ್ಬಂದಿ ಏಕಾಂಗಿಯಾಗಿ ಕುಳಿತು ಕಾಲ ಕಳೆಯುತ್ತಿರುವುದು ಕಾಣಿಸಿತು.

ADVERTISEMENT

ಅಲ್ಲೊಂದು, ಇಲ್ಲೊಂದು ಬೈಕ್, ಗೂಡ್ಸ್, ಆಟೊ, ಆಂಬುಲೆನ್ಸ್ ಹಾಗೂ ಪೊಲೀಸರ ವಾಹನ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ವಾಹನಗಳು ಓಡಾಡುತ್ತಿರುವುದು ಕಾಣಿಸಿತು. ಒಟ್ಟಾರೆ ಲಾಕಡೌನ್‌ಗೆ ತಾಲ್ಲೂಕು ಕೇಂದ್ರದಲ್ಲಿ ಜನರ ಸ್ಪಂದನೆ ಸರಿಯಾಗಿತ್ತು.

ಸರ್ಕಲ್ ಇನ್‌ಸ್ಪೆಕ್ಟರ್ ಮಹಾಂತೇಶ ಪಾಟೀಲ, ಪಿಎಸ್‌ಐ ಸಂತೋಷ ರಾಠೋಡ, ಇನ್ಸಿಡೆಂಟ್ ಕಮಾಂಡರ್ ಚಂದ್ರಕಾಂತ ಪಾಟೀಲ ಮತ್ತು ಪದ್ಮಾವತಿ ಉಸ್ತುವಾರಿ ವಹಿಸಿದ್ದರು.

ಒಂದೆಡೆ ಲಾಕ್‌ಡೌನ್ ಜಾರಿಯಿಂದ ಜನರು ಮನೆಯ ಹೊರಗಡೆ ಬರಲಾಗದೇ, ಒಳಗೂ ಇರಲಾಗದೇ ಸಂಕಷ್ಟ ಅನುಭವಿಸಿದರು. ವಿದ್ಯುತ್ತಿನ ಕಣ್ಣಾಮುಚ್ಚಾಲೆ ಆಟದಿಂದ ಪಟ್ಟಣದ ಜನ ಬಸವಳಿದು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.