ಕಲಬುರ್ಗಿ: ಕೊರೊನಾ ಪ್ರಯುಕ್ತ ಜಿಲ್ಲೆಯಲ್ಲಿ ಒಂದೂವರೆ ತಿಂಗಳಿಂದ ಲಾಕ್ಡೌನ್ ಘೋಷಣೆಯಾಗಿರುವುದರಿಂದ ಎಲ್ಲ ಆಭರಣ ಮಳಿಗೆಗಳೂ ಮುಚ್ಚಿದ್ದರಿಂದ ನಗರದಲ್ಲಿ ಅಕ್ಷಯ ತೃತೀಯ ಭಾನುವಾರ ಕಳೆಗುಂದಿತ್ತು.
ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನ ಖರೀದಿಸಿದರೆ ಒಳ್ಳೆಯದಾಗಲಿದೆ ಎಂಬ ಭಾವನೆ ಮಹಿಳೆಯರಲ್ಲಿ ಇದೆ. ಈ ದಿನಕ್ಕಾಗಿಯೇ ಕಾಯ್ದು ಕುಳಿತು ಚಿನ್ನವನ್ನು ಖರೀದಿ ಮಾಡುವವರೂ ಇದ್ದಾರೆ. ಆದರೆ, ಕೋವಿಡ್ ಸೋಂಕು ಜಿಲ್ಲೆಯ 38 ಜನರಲ್ಲಿ ತಗುಲಿರುವುದರಿಂದ ರಾಜ್ಯ ಸರ್ಕಾರ ಕಲಬುರ್ಗಿಯನ್ನು ರೆಡ್ ಝೋನ್ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಇದರಿಂದಾಗಿ ಕಟ್ಟುನಿಟ್ಟಾಗಿ ಅವಶ್ಯಕವಲ್ಲದ ಎಲ್ಲ ಅಂಗಡಿ, ವಾಣಿಜ್ಯ ಮಳಿಗೆಗಳನ್ನೂ ಬಂದ್ ಮಾಡಿಸಲಾಗಿತ್ತು. ಹೀಗಾಗಿ, ಹಬ್ಬಕ್ಕೆ ಚಿನ್ನ ಖರೀದಿ ಮಾಡಲಾಗಲಿಲ್ಲ.
ಕಳೆದ ವರ್ಷ ನಗರದ ಪ್ರಮುಖ ಆಭರಣ ಮಳಿಗೆಗಳಲ್ಲಿ ಜನಜಾತ್ರೆಯೇ ಸೇರಿರುತ್ತಿತ್ತು. ಕೊರೊನಾ ಹೊಡೆತ ಹಬ್ಬದ ಸಂಭ್ರಮವನ್ನು ಕಸಿದುಕೊಂಡಿತಲ್ಲದೇ ಆಭರಣ ಮಳಿಗೆಗಳ ವಹಿವಾಟನ್ನೂ ಕಸಿದುಕೊಂಡಂತಾಗಿದೆ.
ಸ್ಟೇಶನ್ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್, ಗೋಲ್ಡ್ ಹಬ್, ಸೂಪರ್ ಮಾರ್ಕೆಟ್ನ ಅಕ್ಕಸಾಲಿಗರ ಓಣಿಯಲ್ಲಿರುವ ಅಂಗಡಿಗಳೂ ಬಂದ್ ಆಗಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.