ಜೇವರ್ಗಿ: ಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಡೀಸೆಲ್ ಸಾಗಣೆ ಲಾರಿ ಪಾದಚಾರಿ ಮಾರ್ಗದ ಮೇಲೆ ಹರಿದ ಪರಿಣಾಮ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ಪಟ್ಟಣದ ಬಸ್ ನಿಲ್ದಾಣದ ಎದುರು ಈ ಅವಘಡ ಸಂಭವಿಸಿದೆ.
ಕಲಬುರಗಿ ನಗರದ ಬುಲಂದ್ ದರವಾಜ್ ಕಾಲೊನಿ ನಿವಾಸಿ ತರಕಾರಿಗಳ ಸಗಟು ಮಾರಾಟಗಾರ ಮಹ್ಮದಅಲಿ ನದೀಮಸಾಬ್ (40) ಮೃತರು. ಲಾರಿ ಗುದ್ದಿದ ರಭಸಕ್ಕೆ ಶವ ಗುರುತು ಸಿಗದಷ್ಟು ಛಿದ್ರಗೊಂಡಿದೆ.
ಶಹಾಪುರ ಕಡೆಯಿಂದ ಕಲಬುರಗಿ ಕಡೆ ತೆರಳುತ್ತಿದ್ದ ಡೀಸೆಲ್ ಟ್ಯಾಂಕರ್ ಬಸ್ ನಿಲ್ದಾಣದ ಬಳಿ ಚಾಲಕನ ನಿಯಂತ್ರಣ ತಪ್ಪಿದೆ. ತರಕಾರಿ ವ್ಯಾಪಾರ ಮುಗಿಸಿ ಕಲಬುರಗಿಗೆ ತೆರಳಲು ಬಸ್ ನಿಲ್ದಾಣದ ಒಳಗೆ ಹೋಗುತ್ತಿದ್ದ ಮಹ್ಮದಅಲಿ ಅವರಿಗೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಚಾಲಕನಿಗೂ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಎರಡು ಆಟೊ, ಮೂರ್ನಾಲ್ಕು ದ್ವಿಚಕ್ರ ವಾಹನಗಳು ನಜ್ಜುಗುಜ್ಜಾಗಿವೆ. ಘಟನಾ ಸ್ಥಳಕ್ಕೆ ಪಿಎಸ್ಐ ಗಜಾನಂದ ಬಿರಾದಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.