ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ಜಾನುವಾರುಗಳಿಗೆ ಚರ್ಮಗಂಟು ರೋಗ (ಲಿಂಪಿಸ್ಕೀನ್) ಕಾಣಿಸಿದೆ. ಕಳೆದೊಂದು ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ 128 ಪ್ರಕರಣಗಳು ಪತ್ತೆಯಾಗಿವೆ.
ಒಂದೆಡೆ ಅತಿವೃಷ್ಟಿ ಮತ್ತೊಂದೆಡೆ ನದಿ–ಹಳ್ಳಗಳ ಪ್ರವಾಹದಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರ ನಡುವೆ ಜಾನುವಾರುಗಳಿಗೆ ಈ ಕಾಯಿಲೆ ಬಾಧಿಸುತ್ತಿರುವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.
ಕಳೆದ ವರ್ಷವೂ ಜಿಲ್ಲೆಯಲ್ಲಿ ಈ ರೋಗ ಕಾಣಿಸಿತ್ತು. ಸಾಮೂಹಿಕ ಲಸಿಕೀಕರಣದ ಬಳಿಕ ರೋಗ ಹತೋಟಿಗೆ ಬಂದಿತ್ತು. ಈ ಸಲ ಪುನಃ ರೋಗ ಬಾಧಿಸಿದೆ. ಇದರಿಂದ ಜಾನುವಾರು ತೀವ್ರ ಸಂಕಟ ಅನುಭವಿಸುತ್ತಿವೆ. ರೋಗವು ಜಾನುವಾರು ಮಾಲೀಕರ ಚಿಂತೆಗೀಡು ಮಾಡಿವೆ.
‘ನೆರೆಯ ಮಹಾರಾಷ್ಟ್ರದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದರಿಂದ ಗಡಿ ಭಾಗದಲ್ಲಿರುವ ಜಿಲ್ಲೆಯ ಆಳಂದ, ಅಫಜಲಪುರ ಮತ್ತು ಕಲಬುರಗಿ ತಾಲ್ಲೂಕಿನ ವಿವಿಧೆಡೆ ಈ ರೋಗ ವರದಿಯಾಗುತ್ತಿದೆ. ಹಿಂದೆಲ್ಲ ದೊಡ್ಡ ಜಾನುವಾರುಗಳಿಗೆ ಬಾಧಿಸಿದ್ದ ಚರ್ಮಗಂಟು ರೋಗ ಈ ಸಲ 1ರಿಂದ 6 ತಿಂಗಳ ಅವಧಿಯ ಕರುಗಳಲ್ಲಿ ಹೆಚ್ಚಾಗಿ ಕಾಣಿಸಿದೆ’ ಎಂಬುದು ಪಶು ಇಲಾಖೆ ಅಧಿಕಾರಿಗಳ ಅಂಬೋಣ.
ಆಳಂದ ತಾಲ್ಲೂಕಿನಲ್ಲಿ 35, ಜೇವರ್ಗಿ ತಾಲ್ಲೂಕಿನಲ್ಲಿ 27, ಕಲಬುರಗಿ ತಾಲ್ಲೂಕಿನಲ್ಲಿ 15, ಕಮಲಾಪುರ ತಾಲ್ಲೂಕಿನಲ್ಲಿ 9, ಚಿತ್ತಾಪುರ ತಾಲ್ಲೂಕಿನಲ್ಲಿ 8, ಕಾಳಗಿ ತಾಲ್ಲೂಕಿನಲ್ಲಿ 7, ಶಹಾಬಾದ್ ತಾಲ್ಲೂಕಿನಲ್ಲಿ 6, ಅಫಜಲಪುರ ಹಾಗೂ ಚಿಂಚೋಳಿ ತಾಲ್ಲೂಕುಗಳಲ್ಲಿ ತಲಾ 5, ಯಡ್ರಾಮಿ ತಾಲ್ಲೂಕಿನಲ್ಲಿ 4 ಹಾಗೂ ಸೇಡಂ ತಾಲ್ಲೂಕಿನಲ್ಲಿ 3 ಪ್ರಕರಣಗಳು ವರದಿಯಾಗಿವೆ.
ರೋಗ ಬಂದ ಕೆಲವೇ ದಿನಗಳಲ್ಲಿ ಜಾನುವಾರುಗಳ ಮೈಯೆಲ್ಲ ಗಂಟುಗಳು ಕಾಣಿಸುತ್ತವೆ. ಬಳಿಕ ಅವು ದೇಹವೆಲ್ಲ ವ್ಯಾಪಿಸಿಕೊಂಡು ಜಾನುವಾರುಗಳನ್ನು ಜರ್ಝರಿತಗೊಳಿಸಿ, ನಿಸ್ತೇಜಗೊಳಿಸುತ್ತವೆ. ಬೇಗ ಲಸಿಕೆ ಹಾಕಿಸದಿದ್ದರೆ ಅಸುನೀಗುವ ಅಪಾಯವೂ ಇದೆ. ಚರ್ಮಗಂಟು ರೋಗಕ್ಕೆ ನೆರೆಯ ಬೀದರ್ ಜಿಲ್ಲೆಯಲ್ಲಿ ಈಗಾಗಲೇ ಹೋರಿಯೊಂದು ಬಲಿಯಾಗಿದೆ.
ಏನಿದು ಚರ್ಮಗಂಟು ರೋಗ?:
‘ಚರ್ಮಗಂಟು ಒಂದು ವೈರಾಣುವಿನಿಂದ ಹರಡುವ ರೋಗ. ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ವೇಗವಾಗಿ ಹರಡುತ್ತದೆ. ಅದರಲ್ಲೂ ಮಳೆ, ಮೋಡ ಕವಿದ ವಾತಾವರಣ ಇದ್ದರೆ ಹರಡುವಿಕೆ ವೇಗ ಪಡೆಯುತ್ತದೆ. ಹೀಗಾಗಿ ರೋಗಪೀಡಿತ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟಬೇಕು. ಅಂಥ ಜಾನುವಾರಗಳ ಆರೈಕೆ ಬಳಿಕ ಆರೋಗ್ಯವಂತ ಜಾನುವಾರಗಳನ್ನು ಮುಟ್ಟುವ ಮುನ್ನ ಕೈಗಳನ್ನು ಶುಚಿಯಾಗಿ ತೊಳೆದುಕೊಳ್ಳಬೇಕು’ ಎಂಬುದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳ ಸಲಹೆ.
Highlights - null
‘ಚುರುಕು ಪಡೆದ ಲಸಿಕೀಕರಣ’
‘ಜಿಲ್ಲೆಯಲ್ಲಿ ಚರ್ಮಗಂಟು ರೋಗ ನಿಯಂತ್ರಣಕ್ಕೆ ಲಸಿಕೀಕರಣ ನಡೆಸಲಾಗುತ್ತಿದೆ. ಕಳೆದ ಏಪ್ರಿಲ್ನಲ್ಲಿ ಜಿಲ್ಲೆಯ 266350 ಜಾನುವಾರುಗಳಿಗೆ ಲಸಿಕೆ ನೀಡಲಾಗಿತ್ತು. ಸದ್ಯ ಜಿಲ್ಲೆಯಲ್ಲಿ 1 ಲಕ್ಷ ಲಸಿಕೆಗಳು ಲಭ್ಯವಿದ್ದು ಕಳೆದ 20 ದಿನಗಳಲ್ಲಿ ಜಿಲ್ಲೆಯ 71587 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಇನ್ನೂ 75 ಸಾವಿರ ಲಸಿಕೆ ಪೂರೈಕೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ರೈತ ಬಾಂಧವರು ಕಾಳಜಿ ವಹಿಸಿ 1 ತಿಂಗಳ ಮೇಲ್ಪಟ್ಟ ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಸಂಜಯ ರೆಡ್ಡಿ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.