ಆಳಂದ: ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದ ಬಾಲಕರು ಸಹ ಶ್ರಾವಣ ಮಾಸದ ಅಂಗವಾಗಿ ತಮ್ಮ ಓಣಿಗಳಲ್ಲಿನ ದೇವರ ಪಲ್ಲಕ್ಕಿ ಉತ್ಸವಗಳನ್ನು ಮುಖ್ಯಬೀದಿಗಳಲ್ಲಿ ಕೈಗೊಂಡು ಸಂಭ್ರಮಿಸಿದರು.
ಮಾದನ ಹಿಪ್ಪರಗಿ ಗ್ರಾಮದಲ್ಲಿ ಶ್ರಾವಣ ಮಾಸ ಮುಗಿದ ನಂತರ ಪ್ರಮುಖ ನಾಲ್ಕು ದೇವರುಗಳ ಪಲ್ಲಕ್ಕಿಗಳು ನಡೆಯುತ್ತವೆ. ಇದನ್ನೆ ಅನುಸರಿಸಿ ಮಕ್ಕಳು ಗ್ರಾಮದ ಓಣಿಗಳಲ್ಲಿರುವ ಸಣ್ಣ ದೇವರಗಳ ಪಲ್ಲಕ್ಕಿ ಉತ್ಸವಗಳನ್ನು ಮಾಡುವುದು ವಿಶೇಷ.
ಚಿಣ್ಣರು ತಮ್ಮ ಓಣಿಯಲ್ಲಿನ ಮನೆಗಳಿಗೆ ತಿರುಗಿ ಚಂದಾ ಮತ್ತು ಗೋದಿ ಬೆಲ್ಲ ಸಂಗ್ರಹಿಸುತ್ತಾರೆ. ಗುಡಿಯ ಮುಂದೆ ಇಡಿ ರಾತ್ರಿ ಭಜನೆ ಮಾಡಿ, ಮರುದಿನ ಬೆಳ್ಳಗೆ ಸಣ್ಣದಾದ ತೊಟ್ಟಿಲುಗಳಲ್ಲಿ ದೇವರ ಫೋಟೊ ಇಟ್ಟು ಸಿಂಗರಿಸುತ್ತಾರೆ. ನಂತರ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊರಡುತ್ತದೆ.
ಚಿಣ್ಣರೇ ಡೊಳ್ಳು, ಹಲಗೆ ಬಾರಿಸುತ್ತ, ಶಂಖನಾದಗಳು ಮೊಳಗಿಸುತ್ತ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.
ಚಿಣ್ಣರ ಹಿರೊಡೇಶ್ವರ ಪಲ್ಕಕ್ಕಿ ಮೆರವಣಿಗೆ ಸ್ಥಳೀಯ ಶಿವಲಿಂಗೇಶ್ವರ ವಿರಕ್ತ ಮಠದ ಮುಂದೆ ಬಂದಾಗ ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮಿಗಳು ಪಲ್ಲಕ್ಕಿಯಲ್ಲಿ ಧನ ಸಹಾಯ ರೂಪದಲ್ಲಿ ಕಾಣಿಕೆ ಇತ್ತರು. ಇದೇ ರೀತಿ ಗ್ರಾಮದಲ್ಲಿ ಪ್ರತಿವರ್ಷ ಒಟ್ಟು ಹನ್ನೊಂದು ಚಿಣ್ಣರ ಪಲ್ಲಕ್ಕಿ ಉತ್ಸವಗಳು ನಡೆಯುತ್ತವೆ. ಇಂದಿನ ಪಲ್ಲಕ್ಕಿ ಮೆರವಣಿಗೆಯ ಚಿಣ್ಣರಾದ ಗುರುಲಿಂಗಪ್ಪ ಪಾಟೀಲ, ಸಮರ್ಥ ಸ್ವಾಮಿ, ಸುಪ್ರೀತ, ಬಸವರಾಜ, ಶ್ರೇಯಾ ಅರಳಿಮಾರ, ತೆಂಗಮ್ಮ ಪಾಟೀಲ, ಪಲ್ಲವಿ, ವಿರೇಶ, ಶಿವಲಿಂಗ, ಮಹಾಂತಪ್ಪ ಹಾಗೂ ವಿರೇಶ ಕೋಣದೆ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.