ADVERTISEMENT

ಆಳಂದ: ಮಾದನ ಹಿಪ್ಪರಗಿ ಖಂಡೇಶ್ವರ ಕಾರಣಿಕೋತ್ಸವ

ಮುಖ್ಯಬೀದಿಗಳಲ್ಲಿ ಆಕರ್ಷಕ ಪಂಜಿನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 16:02 IST
Last Updated 16 ಅಕ್ಟೋಬರ್ 2021, 16:02 IST
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಖಂಡೇಶ್ವರ ಕಾರಣಿಕೋತ್ಸವ ಜರುಗಿತು
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಖಂಡೇಶ್ವರ ಕಾರಣಿಕೋತ್ಸವ ಜರುಗಿತು   

ಆಳಂದ: ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಶನಿವಾರ ಖಂಡೇಶ್ವರ ದೇವರ ಕಾರಣಿಕೋತ್ಸವವು ಸಂಭ್ರಮದಿಂದ ಜರುಗಿತು.

ಗ್ರಾಮದ ಸಂಗಮೇಶ್ವರ ದೇವಸ್ಥಾನದಿಂದ ಗ್ರಾಮದ ಮುಖ್ಯಬೀದಿಗಳ ಮೂಲಕ ಖಂಡೇಶ್ವರ ದೇವಸ್ಥಾನದವರೆಗೆ ಆಕರ್ಷಕ ಪಂಜಿನ ಮೆರವಣಿಗೆಯು ಸಡಗರದಿಂದ ನಡೆಯಿತು.

ಸಾವಿರಾರು ಜನರು ಕೈಯಲ್ಲಿ ದೀವಟಗಿಯನ್ನು ಹಿಡಿದು ಸಾಲು ಸಾಲಾಗಿ ಓಡುವ ದೃಶ್ಯ ಗಮನ ಸೆಳೆಯಿತು. ಭಂಡಾರದ ಬಣ್ಣದಲ್ಲಿ ಮಿಂದೆದ್ದ ಯುವಕರು ‘ಏಳು ಕೋಟೆ ಏಳು ಕೋಟೆ ಮಲ್ಲಯ್ಯ ಉಘೇ ಉಘೇ’ ಘೋಷಣೆಗಳನ್ನು ಮೊಳಗಿಸಿದರು. ರಾಸುಗಳಿಗೆ ಭಂಡಾರದ ಬಣ್ಣ ಬಳಿದು ವಿಶೇಷವಾಗಿ ಸಿಂಗರಿಸಿ ಮೆರವಣಿಗೆ ಮಾಡಲಾಯಿತು.

ADVERTISEMENT

ಶಿವಲಿಂಗೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ, ಹಿರೇಮಠನ ಶಾಂತವೀರ ಸ್ವಾಮೀಜಿ ಸೇರಿದಂತೆ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.

ಮಾದನ ಹಿಪ್ಪರಗಿ ಸುತ್ತಲಿನ ಗ್ರಾಮಸ್ಥರು ಸಹ ಕಾರಣಿಕೋತ್ಸವದಲ್ಲಿ ಪಾಲ್ಗೋಳಲು ನಡುರಾತ್ರಿಯಲ್ಲಿ ಗ್ರಾಮಕ್ಕೆ ಬಂದಿದ್ದರು. ಗ್ರಾಮದ ಮುಖ್ಯಬೀದಿಗಳಲ್ಲಿ ವೈಭವದಿಂದ ನಡೆದ ದೀವಟಗಿ ಮೆರವಣಿಗೆಗೆ ಹಲಗೆ, ಡೊಳ್ಳು ಕುಣಿತ ಹಾಗೂ ಭಾಜಾ ಭಜಂತ್ರಿಯ ವಾದ್ಯಗಳು ಕಳೆ ಕಟ್ಟಿದವು. ಖಂಡೇರಾವ ದೇವಸ್ಥಾನದಲ್ಲಿ ಅರಳು ಹುರಿಯುವ ಆಚರಣೆಯನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಕೈಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.