ಕಲಬುರ್ಗಿ: ಭಾಷಾ ಅಲ್ಪಸಂಖ್ಯಾತ ಸಮುದಾಯವಾದ ‘ಮಾಹೇಶ್ವರಿ’ಯನ್ನು ಕರ್ನಾಟಕದ ಜಾತಿ ಪಟ್ಟಿಯಲ್ಲಿ ಸೇರಿಸದೇ ಇದ್ದುದರಿಂದ ಶೈಕ್ಷಣಿಕ ಹಾಗೂ ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಜಾತಿ ಪ್ರಮಾಣಪತ್ರ ಸಿಗುತ್ತಿಲ್ಲ. ಆದ್ದರಿಂದ ಕೂಡಲೇ ಜಾತಿಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಗೋವಾ ಪ್ರದೇಶ ಮಾಹೇಶ್ವರಿ ಸಭಾ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ 2600 ಮಾಹೇಶ್ವರಿ ಸಮುದಾಯದ ಕುಟುಂಬಗಳಿದ್ದು, 14,500 ಜನಸಂಖ್ಯೆ ಇದೆ. ಮೂಲತಃ ರಾಜಸ್ಥಾನದಿಂದ ವಲಸೆ ಬಂದು ವಿವಿಧ ಜಿಲ್ಲೆಗಳಲ್ಲಿ ನೆಲೆಸಿದ್ದು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಾಗಿವೆ. ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ.
2015ರಲ್ಲಿ ಜಾತಿ ಆಧಾರಿತ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ನಡೆಸಿದಾಗಲೂ ಮಾಹೇಶ್ವರಿ ಸಮುದಾಯಕ್ಕೆ ಕ್ರಮ ಸಂಖ್ಯೆ ಮುದ್ರಿಸಲಾಗಿತ್ತು. ಅದರಂತೆ ಮಾಹೇಶ್ವರಿ ಎಂದು ಸೇರ್ಪಡೆ ಮಾಡಿದ್ದೇವೆ. ಆಗ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಎಚ್.ಕಾಂತರಾಜ ಅವರು ವಿವಿಧೆಡೆ ಪ್ರವಾಸ ಮಾಡಿ ಸಮಾಜದ ಸದಸ್ಯರೊಂದಿಗೆ ಚರ್ಚೆ ನಡೆಸಿ ಅದರ ವರದಿಯನ್ನು ಸಲ್ಲಿಸಿದೆ. ಮತ್ತೆ 2021ರ ಸೆಪ್ಟೆಂಬರ್ನಲ್ಲಿ ಆಯೋಗದ ಅಧ್ಯಕ್ಷ ಶಂಕರಪ್ಪ ಅವರು ಮನವಿ ಸ್ವೀಕರಿಸಿ ವಿವಿಧ ಊರುಗಳಿಗೆ ತೆರಳಿ ಪರಿಶೀಲಿಸಿ ವರದಿ ಸಿದ್ಧಪಡಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ಜಾತಿ ಪಟ್ಟಿಯಲ್ಲಿ ಮಾಹೇಶ್ವರಿ ಸಮುದಾಯವನ್ನು ಸೇರಿಸಬೇಕು. ಭಾಷಾ ಅಲ್ಪಸಂಖ್ಯಾತ ಸಮುದಾಯ ಎಂದು ಸರ್ಕಾರದ ದಾಖಲೆಯಲ್ಲಿ ನಮೂದಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ನಥಮಲ್ ಕಲಂತ್ರಿ, ಪ್ರಧಾನ ಕಾರ್ಯದರ್ಶಿ ಭಾಗೀರಥ ಸಿಕಚಿ, ಸಹ ಕಾರ್ಯದರ್ಶಿ ಸಾಗರ ಮಾಲಾಣಿ, ಖಜಾಂಚಿ ಅಮಿತ್ ಲೋಯಾ, ಓಂಪ್ರಕಾಶ್ ತೋಷಣಿವಾಲ, ರಮೇಶ ಬಲ್ದವಾ ಇದ್ದರು.
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.