ಕಲಬುರಗಿ: ಜಿಲ್ಲೆಯಲ್ಲಿ 15ನೇ ಹಣಕಾಸಿನಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಜಿಲ್ಲೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇಎಸ್ಎಂಎಫ್ನಲ್ಲಿ ನೊಂದಣಿಯಾದರೂ ವೇತನ ನಿಡದೇ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಅನುಕಂಪದ ನೇಮಕಾತಿ ಮಾಡಿಕೊಳ್ಳದೆ, ಬಾಕಿ ಇರುವ ಹಳೆಯ 10–18 ತಿಂಗಳ ವೇತನ ನೀಡಲು ತಮ್ಮ ಆದೇಶ ಇದ್ದರೂ 15ನೇ ಹಣಕಾಸಿನಲ್ಲಿ ಯೋಜನಾ ವರದಿ ತಯಾರು ಮಾಡುವಾಗ ಸಿಬ್ಬಂದಿ ವೇತನಕ್ಕೆ ಅನುದಾನ ಉಳಿಸದೇ ಸಂಪೂರ್ಣವಾಗಿ ಖರ್ಚು ಮಾಡುವ ಮೂಲಕ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಜಿಲ್ಲಾ ಪಂಚಾಯಿತಿಯಲ್ಲಿ ನೂರಾರು ನೌಕರರ ಸೇವಾ ಹಿರಿತನ ಅನುಮೋದನೆ ನೀಡದೆ ಹಣ ನೀಡಿದವರಿಗೆ ಮಾತ್ರ ಜಿಲ್ಲಾ ಪಂಚಾಯಿತಿಯಲ್ಲಿ ಅನುಮೋದನೆ ನೀಡಲಾಗುತ್ತಿದೆ. ಕಸಗುಡಿಸುವ, ನಳ ಬಿಡುವ ಪಂಚಾಯಿತಿ ನೌಕರರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸಿಬ್ಬಂದಿಯನ್ನು 2.0 ಪಂಚತಂತ್ರದಲ್ಲಿ ನೋಂದಾಯಿಸಲು ಸಹ ಅನವಶ್ಯಕವಾದ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಅಧಿಕಾರ ಇಲ್ಲದಿದ್ದರೂ ಸುಳ್ಳು ದಾಖಲೆಗಳು ಸೃಷ್ಟಿಸಿ ಅಕ್ರಮ ನೇಮಕಾತಿಗಳು ನಡೆಯುತ್ತಿವೆ ಎಂದಿದ್ದಾರೆ.
ಸಂಘದ ಕಮಲಾಪುರ ತಾಲ್ಲೂಕು ಗೌರವಾಧ್ಯಕ್ಷ ಸುನೀಲ ಮಾನಪಡೆ ಹಾಗೂ ಪದಾಧಿಕರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.