ADVERTISEMENT

ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ: ಸವದಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 8:35 IST
Last Updated 18 ಫೆಬ್ರುವರಿ 2021, 8:35 IST
ಸಾರಿಗೆ ಸಚಿವ ಲಕ್ಷ್ಮಣ ಸವದಿ
ಸಾರಿಗೆ ಸಚಿವ ಲಕ್ಷ್ಮಣ ಸವದಿ   

ಕಲಬುರ್ಗಿ: ಕೆಲವೊಂದು ಯೋಜನೆಗಳು ಕೈ ತಪ್ಪಿದಾಗ ಅಸಮಾಧಾನ ಆಗುವುದು ಸಹಜ. ಹಾಗೆಂದು ಪ್ರತ್ಯೇಕ ರಾಜ್ಯದ ಕೂಗು ಎತ್ತುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏಮ್ಸ್, ಜವಳಿ ಪಾರ್ಕ್ ಸೇರಿದಂತೆ ವಿವಿಧ ಯೋಜನೆಗಳು ಕಲಬುರ್ಗಿ ಕೈ ತಪ್ಪಿದ ವಿಚಾರವಾಗಿ ಜನರು ಬೇಸರ ಪಡುವ ಅಗತ್ಯವಿಲ್ಲ. ಈ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

ಕೊರೊನಾ, ಲಾಕ್ ಡೌನ್, ಅತಿವೃಷ್ಟಿ ಇತ್ಯಾದಿಗಳ ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದೂ ಆಶಯ ವ್ಯಕ್ತಪಡಿಸಿದರು.

ADVERTISEMENT

ಕಲ್ಯಾಣ ಕರ್ನಾಟಕ ಎಂದು ಹೆಸರು ಮಾತ್ರ ಬದಲಾಯಿಸಿದ್ದೇವೆ ಎನ್ನುವುದು ಸರಿಯಲ್ಲ. ಈ ಹೆಸರಿನಿಂದಲೇ ಈ ಭಾಗದ ಬದಲಾವಣೆ ಆಗುತ್ತಿದೆ. ಅಭಿವೃದ್ಧಿ ಮಾಡಬಹುದೆಂಬ ಸದಿಚ್ಚೆಯಿಂದ ಮಾಡಿದ್ದೇವೆ. ಒಂದಲ್ಲ ಒಂದು ದಿನ ಈ ಭಾಗದ ಕಲ್ಯಾಣ ಆಗುತ್ತದೆ ಎಂದರು.

ಈ ಭಾಗದ ಕೆಲವು ಯೋಜನೆಗಳು ಬೇರೆ ಕಡೆ ಸ್ಥಳಾಂತರವಾಗಿರುವುದು ನನಗೆ ಗೊತ್ತಿಲ್ಲ. ಐ.ಐ.ಟಿ ಬಂದಾಗ ಧಾರವಾಡಕ್ಕೆ ಕೊಟ್ಟಿದ್ದೇವೆ. ಐ.ಐ.ಐ.ಟಿ ಬಂದಾಗ ರಾಯಚೂರಿಗೆ ಕೊಟ್ಟಿದ್ದೇವೆ.

ಎಲ್ಲ ಪ್ರದೇಶಗಳನ್ನು ಸಮಾನವಾಗಿ ಕಾಣುವ ಉದ್ದೇಶದಿಂದ ಕೇಂದ್ರ ಸರ್ಕಾರ ಏಮ್ಸ್ ಅನ್ನು ಹುಬ್ಬಳ್ಳಿಗೆ ಕೊಟ್ಟಿರಬಹುದು. ಈ ಭಾಗಕ್ಕೆ ಅನ್ಯಾಯ ಆಗಿದೆ ಎಂಬ ಭಾವ ಸರಿಪಡಿಸುವ ಪ್ರಯತ್ನ ಮಾಡುತ್ತೇವೆ ಅಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.