ADVERTISEMENT

ಗಡಿಕೇಶ್ವಾರದಲ್ಲಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಗ್ರಾಮ ವಾಸ್ತವ್ಯ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸಭೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 8:04 IST
Last Updated 2 ನವೆಂಬರ್ 2021, 8:04 IST
   

ಕಲಬುರಗಿ: ‘ಭೂಕಂಪನದಿಂದ ತತ್ತರಿಸಿರುವ ಗಡಿಕೇಶ್ವಾರ ಗ್ರಾಮದಲ್ಲಿ ನವೆಂಬರ್ 11 ರಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಮಾಡುತ್ತೇನೆ‘ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ
ತಿಳಿಸಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ’ಅಂದು ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಅಲ್ಲಿಯೇ ರಾತ್ರಿ ವಾಸ್ತವ್ಯ ಮಾಡಲಾಗುವುದು. ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು‘ ಎಂದು ಚಿಂಚೋಳಿ ತಹಶೀಲ್ದಾರ್ ಅಂಜುಂ ತಬಸ್ಸುಮ್ ಅವರಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ‘ಭೂಕಂಪನದ ತೀವ್ರತೆ ಅಳೆಯಲು ಹೈದರಾಬಾದ್‌ನ ಭೂ ವಿಜ್ಞಾನಿಗಳು ಇಲ್ಲಿ ಸಿಸ್ಮೋಮೀಟರ್ ಸ್ಥಾಪಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ 1 ರಿಂದ 4ರಷ್ಟು ತೀವ್ರತೆ ಇಲ್ಲಿ ದಾಖಲಾಗುತ್ತಿದ್ದರೂ ಕೆಲವೊಂದು ಮನೆಗಳು ಬಿರುಕು ಬಿಟ್ಟಿರುವುದು ಬಿಟ್ಟರೆ ಹೆಚ್ಚಿನ ಹಾನಿಯಾಗಿಲ್ಲ. ಇದರಿಂದ 20 ಗ್ರಾಮಗಳು ಬಾಧಿತವಾಗಿದ್ದು, 5 ಗ್ರಾಮದಲ್ಲಿ ಸಾಮೂಹಿಕ ಶೆಡ್ ನಿರ್ಮಿಸಲಾಗಿದೆ. ಕಾಳಜಿ ಕೇಂದ್ರ ತೆರೆದು ಗ್ರಾಮಸ್ಥರಿಗೆ ಊಟ ಪೂರೈಸಲಾಗುತ್ತಿದೆ‘ ಎಂದು ಅವರು
ಹೇಳಿದರು.

ADVERTISEMENT

ಚಿಂಚೋಳಿ ಶಾಸಕ ಡಾ. ಅವಿನಾಶ್ ಜಾಧವ ಮಾತನಾಡಿ, ಗಡಿಕೇಶ್ವಾರ ಸುತ್ತಮುತ್ತ 60 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪನದ ಸದ್ದಿನ ಕಾರಣ ಕಳೆದ 2 ತಿಂಗಳಿಂದ ಇಲ್ಲಿನ ಜನ ಸರಿಯಾಗಿ ನಿದ್ದೆ ಮಾಡಿಲ್ಲ. ಮನೆ ಮುಂದೆ ಶೆಡ್ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದ್ದು, ಸರ್ಕಾರ ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ ಎಂದು ಹೇಳಿದರು.

ಕೃಷಿಯಲ್ಲಿ ಇಸ್ರೇಲ್ ಪದ್ಧತಿ ಬಳಕೆ ನಿಟ್ಟಿನಲ್ಲಿ ಕೂಡಲೇ 1,000 ಎಕರೆ ತೋಟಗಾರಿಕೆ ಪ್ರದೇಶ ಗುರುತಿಸಿದಲ್ಲಿ ಇಸ್ರೇಲ್ ಕಾನ್ಸುಲೇಟ್ ಜನರಲ್ ಅಧಿಕಾರಿಗಳನ್ನು ಜಿಲ್ಲೆಗೆ ಕರೆತರಲಾಗುವುದು. ತೋಟಗಾರಿಕೆ ಸಚಿವರೊಂದಿಗೆ ಇಲ್ಲಿಯೇ ಒಂದು ದಿನದ ಕಾರ್ಯಾಗಾರ ಆಯೋಜಿಸಿ ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಮುರುಗೇಶ ನಿರಾಣಿ ಅವರು ತಿಳಿಸಿದರು.

ಶಹಾಬಾದ್‌ ಇಎಸ್‌ಐಸಿ ಆಸ್ಪತ್ರೆ ನವೀಕರಣ ಕಾರ್ಯದ ಉಳಿದ ಕೆಲಸಗಳನ್ನು ಶೀಘ್ರವೇ ಪೂರ್ಣಗೊಳಿಸಿ ಉದ್ಘಾಟನೆಗೆ ಸಜ್ಜುಗೊಳಿಸಬೇಕೆಂದು ಸಚಿವರು ನಿರ್ದೇಶನ
ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.