ADVERTISEMENT

ಪರಿಶಿಷ್ಟರ ಕಾಲೊನಿಗೆ ಹೋಗದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 3:10 IST
Last Updated 20 ಅಕ್ಟೋಬರ್ 2021, 3:10 IST
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದ ಪರಿಶಿಷ್ಟರ ಕಾಲೊನಿಯ ಮಹಿಳೆಯರು ಸಚಿವ ಆರ್.ಅಶೋಕ ಅವರ ಆಗಮನಕ್ಕಾಗಿ ಕಾದು ಕುಳಿತ ಸಂದರ್ಭ –ಪ್ರಜಾವಾಣಿ ಚಿತ್ರ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದ ಪರಿಶಿಷ್ಟರ ಕಾಲೊನಿಯ ಮಹಿಳೆಯರು ಸಚಿವ ಆರ್.ಅಶೋಕ ಅವರ ಆಗಮನಕ್ಕಾಗಿ ಕಾದು ಕುಳಿತ ಸಂದರ್ಭ –ಪ್ರಜಾವಾಣಿ ಚಿತ್ರ   

ಗಡಿಕೇಶ್ವಾರ: ಗಡಿಕೇಶ್ವಾರ ಗ್ರಾಮದಲ್ಲಿ ಸಂಚರಿಸಿದ ಸಚಿವ ಆರ್‌.ಅಶೋಕ ಅವರು, ಪರಿಶಿಷ್ಟರ ಕಾಲೊನಿಗೆ ಭೇಟಿ ನೀಡದೇ ಮುಂದೆ ಸಾಗಿದರು. ಇದರಿಂದ ಆಕ್ರೋಶಗೊಂಡ ಅಲ್ಲಿನ ನಿವಾಸಿಗಳು ಸಚಿವ ಹಾಗೂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ವಿರುದ್ಧ ಹರಿಹಾಯ್ದರು.

ಸಚಿವರನ್ನು ಸ್ವಾಗತಿಸಲು ಹಲವರು ಕಾಲೊನಿಯ ರಸ್ತೆಯಲ್ಲಿ ನಿಂತುಕೊಂಡಿದ್ದರು. ಮಹಿಳೆಯರು ಕೂಗಿ ಕರೆದರೂ ಅದು ಕೇಳಿಸದೇ ಸಚಿವರು ಗುಂಪಿನಲ್ಲಿ ಸಾಗಿದರು. ಇದರಿಂದ ಬೇಸರಗೊಂಡ ಮಹಿಳೆಯರು ‘ನಾವೇನು ನಿಮಗೆ ಅನ್ಯಾಯ ಮಾಡಿದ್ದೇವೆ. ಕೇಳಿಸಿದರೂ ಕೇಳದ ಹಾಗೆ ಏಕೆ ಹೋಗುತ್ತೀರಿ. ಬಡವರಿಗೆ ಬೆಲೆಯೇ ಇಲ್ಲವೇ...’ ಎಂದು ಕೂಗಾಡಿದರು.

‘ಪರಿಶಿಷ್ಟರ ಕಾಲೊನಿಯಲ್ಲೂ 103 ಮನೆಗಳಿವೆ. ಗೋಡೆಗಳು ಸೀಳಿವೆ. ಮಕ್ಕಳು, ವೃದ್ಧರು, ಮಹಿಳೆಯರು ಅಂಗಳದಲ್ಲೇ ಮಲಗುವಂತಾಗಿದೆ. ಪರಿಶಿಷ್ಟರ ಕಾಲೊನಿಯತ್ತ ಕಣ್ಣೆತ್ತಿ ನೋಡದೇ ಹೋಗಿದ್ದಾರೆ. ಅವರಿಗೆ ಬೇಕಾದವರ ಓಣಿ, ಮನೆಗಳನ್ನು ಮಾತ್ರ ಪರಿಗಣಿಸಿದ್ದಾರೆ’ ಎಂದು ಶರಣಮ್ಮ ಅಂಬಣ್ಣ ಏರಾ, ರುದ್ರಮ್ಮ ಚಂದ್ರಪ್ಪ, ನಿಂಗಮ್ಮ ಕಿಡಿ ಕಾರಿದರು.

ADVERTISEMENT

‘ಒಂದೇ ಊರಿನಲ್ಲಿ ಎರಡು ರೀತಿ ನಡೆದುಕೊಳ್ಳುವುದು ಏಕೆ. ಒಂದೊಂದು ಸಣ್ಣ ಸಣ್ಣ ಮನೆಗಳಲ್ಲಿ ಐದಾರು ಕುಟುಂಬಗಳು ವಾಸಿಸುತ್ತವೆ. ಶೆಡ್‌ ನಿರ್ಮಿಸಲೂ ಜಾಗವಿಲ್ಲ. ಬಿರುಕು ಬಿಟ್ಟ ಮನೆ ಗಳನ್ನು ತೆಗೆದು, ಹೊಸ ಮನೆ ಕಟ್ಟಿಸಿ ಕೊಡಬೇಕು. ಇಲ್ಲದಿದ್ದರೆ ನಾವು ಇಲ್ಲೇ ಸಮಾಧಿಯಾಗುವುದನ್ನು ನೋಡುವುದಕ್ಕೆ ಬನ್ನಿ.

ಮುಖಂಡರ ಈ ನಡೆಯಿಂದ ಊರಿನಲ್ಲಿ ವಿರಸ ಮೂಡುವಂತಾಗಿದೆ’ ಎಂದೂ ಮಹೇಶ ಹೊಸಮನಿ, ಜಗದೇವಿ ಹಾಜಪ್ಪ ಯಡಗಾರ, ಗಣಪತಿ, ತಿಪ್ಪಣ್ಣ, ಅಂಬರೀಶ, ಶರಣಪ್ಪ ಕೂದಲದವರ, ಗಂಗಮ್ಮ ಶರಣಪ್ಪ ಶಿವಯೋಗಿ ತಮ್ಮ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.