ಗಡಿಕೇಶ್ವಾರ (ಕಲಬುರಗಿ ಜಿಲ್ಲೆ): ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಕಂದಾಯ ಸಚಿವ ಆರ್.ಅಶೋಕ ಅವರು, ಭೂಕಂಪನದಿಂದ ಬಿರುಕುಬಿಟ್ಟ ಮನೆಗಳ ಮಾಲೀಕರಿಗೆ ತಲಾ ₹ 50 ಸಾವಿರ ಪರಿಹಾರ ವಿತರಿಸಿದರು.
ಗ್ರಾಮದಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿನ ಸಂತ್ರಸ್ತರ ಗೋಳು ಆಲಿಸಿದ ಅವರು, ‘ಬಿರುಕುಬಿಟ್ಟ 20 ಮನೆಗಳ ದುರಸ್ತಿಗಾಗಿ ತಾತ್ಕಾಲಿಕ ಪರಿಹಾರ ನೀಡಲಾಗುವುದು. ಪದೇಪದೇ ಭೂಕಂಪನದ ಕಾರಣ ಸಂಕಷ್ಟ ಎದುರಿಸಿದವರು, ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದವರಿಗೂ ಪರಿಹಾರ ನೀಡುವ ಸಂಬಂಧ ಒಂದು ಸಮಿತಿ ರಚಿಸಿ ವರದಿ ತರಿಸಿಕೊಳ್ಳುತ್ತೇನೆ’ ಎಂದರು.
‘ಪ್ರತಿಯೊಂದು ಮನೆ ಮುಂದೆ ಶೆಡ್ ನಿರ್ಮಿಸಬೇಕು. ವಾಸಕ್ಕೆ ಯೋಗ್ಯವಲ್ಲದ ಮನೆಗಳನ್ನು ಕೆಡವಿ ಅದೇ ಸ್ಥಳದಲ್ಲಿ ಹೊಸದಾಗಿ ಮನೆ ಕಟ್ಟಿಸಿಕೊಡಬೇಕು ಎಂದು ಜನ ಬೇಡಿಕೆ ಇಟ್ಟಿದ್ದಾರೆ. ಇದರ ಬಗ್ಗೆಯೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ’ ಎಂದೂ ಹೇಳಿದರು.
‘ಸದ್ಯ ಸಂಭವಿಸುತ್ತಿರುವ ಭೂಕಂಪನ ಹಾಗೂ ಸ್ಫೋಟಕ ಸದ್ದಿನಿಂದ ಯಾವುದೇ ಅಪಾಯ ಎದುರಾಗುವುದಿಲ್ಲ ಎಂದು ವಿಜ್ಞಾನಿಗಳು ಪ್ರಾಥಮಿಕ ವರದಿ ನೀಡಿದ್ದಾರೆ. ಇನ್ನೂ ಒಂದು ತಿಂಗಳು ಇಲ್ಲಿ ಅಧ್ಯಯನ ನಡೆಯಲಿದ್ದು, ಅಂತಿಮ ವರದಿ ಬಂದ ನಂತರ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.