ADVERTISEMENT

ಕಮಲಾಪುರ: ಗಾಂಜಾ ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಹಲ್ಲೆ, ಸಿಪಿಐಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 3:57 IST
Last Updated 24 ಸೆಪ್ಟೆಂಬರ್ 2022, 3:57 IST
ಕಾರ್ಯಾಚರಣೆ ವೇಳೆ ಕಮಲಾಪುರ ಸಿಪಿಐ ಶ್ರೀಮಂತ ಇಲ್ಲಾಳ ಗಂಭೀರ ಗಾಯಗೊಂಡಿದ್ದಾರೆ. 
ಕಾರ್ಯಾಚರಣೆ ವೇಳೆ ಕಮಲಾಪುರ ಸಿಪಿಐ ಶ್ರೀಮಂತ ಇಲ್ಲಾಳ ಗಂಭೀರ ಗಾಯಗೊಂಡಿದ್ದಾರೆ.    

ಕಮಲಾಪುರ (ಕಲಬುರಗಿ ಜಿಲ್ಲೆ):ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ತುರೂರಿ ಸಮೀಪದ ವಾಡಿ ಹಾಗೂ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಬಸವಕಲ್ಯಾಣ ತಾಲ್ಲೂಕಿನ ಹೊನ್ನಾಳಿಯ ಜಮೀನಿನಲ್ಲಿ ಶುಕ್ರವಾರ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರ ಮೇಲೆ ಸುಮಾರು 40 ಜನ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಘಟನೆಯಲ್ಲಿ ಕಮಲಾಪುರ ಸಿಪಿಐ ಶ್ರೀಮಂತ ಇಲ್ಲಾಳ ಗಂಭೀರ ಗಾಯಗೊಂಡಿದ್ದಾರೆ.

ಅವರನ್ನು ಮೊದಲು ಬಸವಕಲ್ಯಾಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ತಡರಾತ್ರಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ಪೊಲೀಸರು ಬಚಾವಾಗಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಕಮಲಾಪುರ ತಾಲ್ಲೂಕಿನ ದಸ್ತಾಪುರ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಕಲಬುರಗಿಯ ನವೀನ ಎಂಬಾತನನ್ನು ಗುರುವಾರ ಬಂಧಿಸಿದ್ದರು. ಇನ್ನೊಬ್ಬ ಬಸವಕಲ್ಯಾಣ ತಾಲ್ಲೂಕಿನ ಭೋಸಗಾದ ಸಂತೋಷ ಎಂಬಾತನನ್ನು ಶುಕ್ರವಾರ ಬಂಧಿಸಿದ್ದರು. ಇವರನ್ನು ವಿಚಾರಣೆ ನಡೆಸಿದಾಗ ಮಹಾರಾಷ್ಟ್ರ ಗಡಿಯ ಹೊನ್ನಾಳಿ ಸಮೀಪದ ಜಮೀನೊಂದರಲ್ಲಿ ಗಾಂಜಾ ಬೆಳೆದಿರುವುದಾಗಿ ಬಾಯಿಬಿಟ್ಟಿದ್ದ. ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದಲ್ಲಿ ಮಹಾಗಾಂವ ಪಿಎಸ್ಐ ಆಶಾ ರಾಠೋಡ ಸೇರಿದಂತೆ 10 ಜನರ ತಂಡ ಕಾರ್ಯಾಚರಣೆಗೆ ತೆರಳಿದ್ದರು.

ADVERTISEMENT

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವುದರಿಂದ ಅಲ್ಲಿನ ಪೊಲೀಸರ ಸಹಕಾರ ಪಡೆಯಲು ಕೆಲವರು ತೆರಳಿದ್ದರು. ಸ್ಥಳಕ್ಕೆ ಭೇಟಿ ನೀಡಿದಾಗ ಗಾಂಜಾ ಗಿಡಗಳು ಕಂಡು ಬಂದಿದ್ದು, ಮಹಾರಾಷ್ಟ್ರ ಪೊಲೀಸರು ಬರುವಿಕೆಗಾಗಿ ಕಾಯುತ್ತಿದ್ದರು. ಅಷ್ಟರಲ್ಲೆ ಗುಂಪು ಕಟ್ಟಿಕೊಂಡು ಬಡಿಗೆ, ಕಲ್ಲು ಹಿಡಿದು ಬಂದ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.