
ಪ್ರಜಾವಾಣಿ ವಾರ್ತೆ
ಜೇವರ್ಗಿ: ‘ಯುವ ಪೀಳಿಗೆಗೆ ಗೋವಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಅಗತ್ಯತೆ ಇದೆ’ ಎಂದು ಛತ್ತಿಸಗಡ ರಾಯಪುರದ ಗೋ ಸೇವಾ ಪ್ರಕೋಷ್ಠ, ಮುಸ್ಲಿಂ ರಾಷ್ಟ್ರೀಯ ಮಂಚ್ ರಾಷ್ಟ್ರೀಯ ಸಂಯೋಜಕ ಮೊಹಮ್ಮದ್ ಫೈಜ್ ಖಾನ್ ಹೇಳಿದರು.
ತಾಲ್ಲೂಕಿನ ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಅವರ 103ನೇ ಪುಣ್ಯಾರಾಧನಾ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ ನಾಥ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಭಾರತದಲ್ಲಿ ದೇಸಿ ಗೋ ತಳಿಗಳು ನಶಿಸುತ್ತಿವೆ. ಗೋವಿನ ಸಂಖ್ಯೆ ಇಳಿಕೆಯಾಗುತ್ತಿದೆ. ಗೋವಿನ ಬಗ್ಗೆ ಉದಾಸೀನತೆ ತೋರುತ್ತಿರುವುದು ಇದಕ್ಕೆಲ್ಲ ಕಾರಣ. ಗೋವಿನ ಮಹತ್ವವನ್ನು ಸಾರುವ ಸಮ್ಮೇಳನಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು’ ಎಂದರು.
‘ಗೋಸೇವೆ ಕೇವಲ ಧರ್ಮವಲ್ಲ, ಅದು ಕರ್ತವ್ಯ. ಭಾರತೀಯ ಸಂಸ್ಕೃತಿಯ ಆಧಾರ ಸ್ತಂಭವಾಗಿರುವ ಗೋವು ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಇಡೀ ಮಾನವಕುಲಕ್ಕೆ ತಾಯಿಯ ಸಮಾನ. ಗೋ ಸೇವೆ ಕೋಮು ಸೌಹಾರ್ದತೆಗೆ ದೊಡ್ಡ ಸೇತುವೆಯಾಗಬಲ್ಲದು. ಗೋವಿನ ಸಂರಕ್ಷಣೆಯಿಂದ ಮಾತ್ರ ದೇಶದ ಆರ್ಥಿಕ ಹಾಗೂ ಆಧ್ಯಾತ್ಮಿಕ ಅಭಿವೃದ್ಧಿ ಸಾಧ್ಯ’ ಎಂದರು.
ಕಾರ್ಯಕ್ರಮದಲ್ಲಿ ನಗನೂರಿನ ಸದಾಶಿವ ಶಾಸ್ತ್ರಿ, ವಿಜಯಪುರ ಜಿಲ್ಲೆಯ ಬಸ್ತಿಹಾಳದ ಅಮೋಘಪ್ಪ ಶಾಸ್ತ್ರಿ ಹಾಗೂ ಬಾಗಲಕೋಟೆ ಜಿಲ್ಲೆಯ ಅಮಲಜರಿ ಪರಮಾನಂದ ಶಾಸ್ತ್ರಿ ಅವರಿಗೆ ‘ತ್ರಿವಿಕ್ರಮ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಮಠದ ಪೀಠಾಧಿಪತಿ ಸೋಪಾನನಾಥ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಯಾದಗಿರಿಯ ಏಕದಂಡಗಿ ಮಠದ ಶ್ರೀನಿವಾಸ ಸ್ವಾಮೀಜಿ, ಕನ್ನೂರ ಶಾಂತಿ ಕುಟೀರದ ಶ್ರೀಕೃಷ್ಣ ಸಂಪಗಾಂವಕರ, ಪ್ರಭಾವತಿ ಧರ್ಮಸಿಂಗ್, ಮಾಜಿ ಶಾಸಕ ದೊಡ್ಡಗೋಡ ಪಾಟಿಲ್ ನರಿಬೋಳ, ದೇವರ ಹಿಪ್ಪರಗಿ ಶಾಸಕ ಭೀಮನಗೌಡ ಪಾಟೀಲ, ಶಿವರಾಜ ಪಾಟೀಲ ರದ್ದೇವಾಡಗಿ, ಪಾಂಡುರಂಗ ಮಹಾರಾಜ, ಜಗದೀಶ್ ಶರ್ಮಾ, ಪದ್ಮನಾಭ ಜೋಶಿ ಸ್ವಾಮೀಜಿ, ಶ್ರೀಪಾದಭಟ್ ಜೋಶಿ, ಚಂದಪ್ಪ ತಾಯಮ್ಮಗೋಳ,
ಹಳ್ಳೆಪ್ಪಾಚಾರ್ಯ ಜೋಶಿ, ಲತಾ ಜಾಗೀರದಾರ, ಲಕ್ಷ್ಮಿಕಾಂತ್ ಕುಲಕರ್ಣಿ ಹೋತಿನಮಡು, ನಾರಾಯಣ ಸಿಂಗಾಡೆ, ಜಯಂತ ರಾಯಚೂರು, ಕಾಶಿಂ ಪಟೇಲ್ ಮುದಬಾಳ, ಸಂಜುಕುಮಾರ ಜೋಶಿ, ಬಾಪುರಾವ ಪಾಗಾ, ರಾಘವೇಂದ್ರ ಕುಲಕರ್ಣಿ ಯಡ್ರಾಮಿ, ಜಯಂತ ರಾಯಚೂರು, ಬಸವರಾಜ ಗೌಡ ತಂಗಡಗಿ, ಮೋಹನ್ ರೆಡ್ಡಿ ಹುಡೇದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.