ವಾಡಿ: ಪಟ್ಟಣದ ರಸ್ತೆಗಳಲ್ಲಿ ಸರಕುಗಳನ್ನು ಹೊತ್ತು ಸಾಗುವ ವಾಹನಗಳು ಹೆಚ್ಚು ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟು ಮಾಡುತ್ತಿವೆ. ಹೊಗೆ ಉಗುಳುವ ವಾಹನಗಳಿಂದ ದುಷ್ಪರಿಣಾಮದ ಭೀತಿ ಎದುರಾಗಿದೆ ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಕೆಲವರು ತಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿ ಇಡದೇ ಇರುವುದರಿಂದ ದಟ್ಟವಾದ ಹೊಗೆ ಉಗುಳುತ್ತಾ ಸಾರ್ವಜನಿಕರ ಗೋಳಾಟಕ್ಕೆ ಕಾರಣರಾಗಿದ್ದಾರೆ. ಎಸಿಸಿ ಕಂಪನಿಯ ದೂಳಿನಿಂದ ಕಂಗೆಟ್ಟಿರುವ ಸಾರ್ವಜನಿಕರಿಗೆ ವಾಹನಗಳ ಇಂಗಾಲಯುಕ್ತ ಹೊಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕೆ ಅಂಕುಶ ಹಾಕಬೇಕಿರುವ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರಿಗೆ ಮತ್ತು ಪರಿಸರ ಇಲಾಖೆ ಅಧಿಕಾರಿಗಳು ಇತ್ತ ತಲೆ ಹಾಕುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತೀ ವೇಗ ಮತ್ತು ಅಜಾಗರೂಕತೆಯಿಂದ ಲಾರಿಗಳು ಸಂಚರಿಸುತ್ತವೆ. ಹಿಂದೆ ಬರುವ ವಾಹನಗಳಿಗೆ ದಾರಿ ಕಾಣದಷ್ಟು ಹೊಗೆ ಬರುತ್ತದೆ. ಕೆಲವೊಮ್ಮೆ ಪೊಲೀಸ್ ಠಾಣೆ ಮುಂದೆಯೇ ವಾಹನಗಳು ಕಪ್ಪು ಹೊಗೆ ಸೂಸುತ್ತಾ ಸಾಗುತ್ತಿರುತ್ತವೆ. ಕೂಡಲೇ ಸಾರಿಗೆ ಇಲಾಖೆ ಅಧಿಕಾರಿಗಳು ಇಂತಹ ವಾಹನಗಳ ವಿರುದ್ದ ಕ್ರಮ ಜರುಗಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಕಲುಷಿತ ಹೊಗೆ ಸೂಸುವ ವಾಹನಗಳು ಕಂಡು ಬಂದರೆ ಕೇವಲ ದಂಡ ವಸೂಲಿಗೆ ಸೀಮಿತರಾಗಿ ಕೆಲವರಿಗೆ ದಂಡದ ಬಿಸಿ ಮುಟ್ಟಿಸಿ ವಾರ್ಷಿಕ ಗುರಿ ತಲುಪುತ್ತಿದ್ದಾರೆ ಎನ್ನುವುದು ಸಾರ್ವಜನಿಕರಆರೋಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.