ಕಲಬುರ್ಗಿ:ನಗರದ ನಾಗನಳ್ಳಿಯ ಕೋವಿಡ್ ಕೇರ್ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಸಂಸದ ಡಾ.ಉಮೇಶ ಜಾಧವ ಅವರು, ಕೊರೊನಾ ಸೋಂಕಿತರ ಯೋಗ ಕ್ಷೇಮ ವಿಚಾರಿಸಿದರು.
ಈ ಸಂದರ್ಭದಲ್ಲಿ ರೋಗಿಗಳು ತಮ್ಮ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡರು. ಕೇಂದ್ರಲ್ಲಿ ನಿಯಮಿತವಾಗಿ ತಪಾಸಣೆ ಮಾಡಲು ಯಾರೂ ಬರುವುದಿಲ್ಲ. ಮಾತ್ರೆಗಳನ್ನು ಒಮ್ಮೆ ಮಾತ್ರ ಕೊಟ್ಟಿದ್ದಾರೆ. ಬೆಳಿಗ್ಗೆ ಮಾಡಿದ ಅಡುಗೆಯನ್ನೇ ರಾತ್ರಿಗೆ ಕೊಡುತ್ತಾರೆ. ಸ್ವಚ್ಛತೆ ಇಲ್ಲ. ಶೌಚಾಲಯಗಳಲ್ಲಿ ಬಕೀಟ್ಗಳೂ ಇಲ್ಲ. ಸ್ನಾನ ಮಾಡಲು ಕಷ್ಟವಾಗುತ್ತಿದೆ. ವೃದ್ಧರು, ಮಕ್ಕಳಿಗೆ ಬಿಸಿನೀರು ಸಿಗದೇ ಪರದಾಡುವಂತಾಗಿದೆ ಎಂಬ ಇತ್ಯಾದಿ ಸಮಸ್ಯೆಗಳನ್ನು ಹೇಳಿಕೊಂಡರು.
ತಕ್ಷಣವೇ ಸಂಸದರು ದೂರವಾಣಿ ಮೂಲಕ ಕಲಬುರ್ಗಿ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ, ಜಿಲ್ಲಾ ಆರೋಗ್ಯಾಧಿಕಾರಿ ರಾಜಕುಮಾರ್ ಮಾಳಿ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಹಿರೇಮಠ ಅವರಿಗೆ ಕರೆ ಮಾಡಿ, ಸಮಸ್ಯೆ ನಿವಾರಿಸುವಂತೆ ಸೂಚಿಸಿದರು. ಕೂಡಲೇ ಕೇಂದ್ರ ಆಗಮಿಸಿದ ಅಧಿಕಾರಿಗಳು, ವಿಟಮಿನ್ ಮಾತ್ರೆಗಳು, ಮಾಸ್ಕ್ ಮುಂತಾದ ಅಗತ್ಯ ವ್ಯವಸ್ಥೆ ಕಲ್ಪಿಸಿದರು.
ಸಂಸದರ ಸೂಚನೆ ಮೇರೆಗೆ ಪೌರಕಾರ್ಮಿಕ ಸಿಬ್ಬಂದಿ ಕೂಡ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.