ADVERTISEMENT

ಕಲಬುರಗಿ: ಮುಲ್ಲಾಮಾರಿ ಯೋಜನೆ ನಿರ್ವಹಣೆಗಿಲ್ಲ ಅನುದಾನ

ಕೆಳದಂಡೆ ಕಾಲುವೆ ಹೂಳು ತೆಗೆಯದೇ ಗುತ್ತಿಗೆದಾರರಿಂದ ನಿರ್ಲಕ್ಷ್ಯ; ರೈತರಿಗೆ ಸಂಕಷ್ಟ

ಜಗನ್ನಾಥ ಡಿ.ಶೇರಿಕಾರ
Published 1 ಜನವರಿ 2026, 5:44 IST
Last Updated 1 ಜನವರಿ 2026, 5:44 IST
ಚಿಂಚೋಳಿ ತಾಲ್ಲೂಕಿನ ಚಿಮ್ಮಾಈದಲಾಯಿ ದಸ್ತಾಪುರ ಮಧ್ಯೆ ಸುಮಾರು 2 ಕಿಮೀ ಉದ್ದದಲ್ಲಿ ಮುಖ್ಯ ಕಾಲುವೆಯಲ್ಲಿ ಆಪು ಕಳೆ ಬೆಳೆದು ಕಾಲುವೆಯನ್ನೇ ನುಂಗಿರುವ ದೃಶ್ಯ
ಚಿಂಚೋಳಿ ತಾಲ್ಲೂಕಿನ ಚಿಮ್ಮಾಈದಲಾಯಿ ದಸ್ತಾಪುರ ಮಧ್ಯೆ ಸುಮಾರು 2 ಕಿಮೀ ಉದ್ದದಲ್ಲಿ ಮುಖ್ಯ ಕಾಲುವೆಯಲ್ಲಿ ಆಪು ಕಳೆ ಬೆಳೆದು ಕಾಲುವೆಯನ್ನೇ ನುಂಗಿರುವ ದೃಶ್ಯ   

ಚಿಂಚೋಳಿ: ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ಕಾಲುವೆಗಳು ನಿರ್ವಹಣೆಯಿಲ್ಲದೇ ಬಸವಳಿದಿವೆ. ಇದರಿಂದ ನಾಲೆಯಲ್ಲಿ ನೀರು ಸರಾಗವಾಗಿ ಹರಿಯಲು ಅಡಚಣೆ ಉಂಟಾಗಿದೆ. ಸುಮಾರು 9,713 ಹೆಕ್ಟೇರ್ ಜಮೀನಿಗೆ ನೀರುಣಿಸುವ ಸುಮಾರು 80 ಕಿ.ಮೀ ಉದ್ದದ ಏಕೈಕ ಮುಖ್ಯ ಕಾಲುವೆ ಹೊಂದಿದ ಯೋಜನೆಯು 64 ವಿತರಣಾ ನಾಲೆಗಳನ್ನು ಒಳಗೊಂಡಿದೆ.

ತಾಲ್ಲೂಕಿನ 20ಕ್ಕೂ ಹೆಚ್ಚು ಹಳ್ಳಿಗಳ ರೈತರ ಹಿತದೃಷ್ಟಿಯಿಂದ 2018 ಫೆಬ್ರುವರಿಯಲ್ಲಿ ಲೋಕಸಭೆಯ ವಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸುಮಾರು ₹120 ಕೋಟಿ ಅಂದಾಜು ಮೊತ್ತದ (ಇಆರ್‌ಎಂ) ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಕಾಲುವೆ ಜಾಲದ ಬಲವರ್ಧನೆಗೆ ಚಾಲನೆ ನೀಡಿದ್ದರು.

‘ಗುತ್ತಿಗೆ ಕಂಪನಿ ತನಗೆ ಬೇಕಾದ ಅಧಿಕಾರಿಯನ್ನು ನಿಯೋಜನೆ ಮೇರೆಗೆ ಇಲ್ಲಿಗೆ ವರ್ಗಾಯಿಸಿಕೊಂಡು ಬಂದು ಬಿಲ್ಲು ದಾಖಲಿಸಿಕೊಳ್ಳುವುದರ ಜತೆಗೆ ಕಾಮಗಾರಿ ನಡೆಸಿತು. ಇದಲ್ಲದೇ ಕಾಮಗಾರಿ ಉಪಗುತ್ತಿಗೆ ನೀಡಿದ್ದರಿಂದ ಸಮರ್ಪಕ ಕೆಲಸ ಆಗಿಲ್ಲ’ ಎಂಬುದು ರೈತರ ಆರೋಪವಾಗಿದೆ.

ADVERTISEMENT

‘ಕಳೆದ 5 ವರ್ಷಗಳಿಂದ ನಿರಂತರ ಪ್ರಯತ್ನಿಸುತ್ತಿದ್ದರೂ ನನ್ನ ಹೊಲದ ಬಳಿ ಮುಖ್ಯ ಕಾಲುವೆ ಸಿಸಿ ಲೈನಿಂಗ್ ಮಾಡಿಲ್ಲ’ ಎಂದು ಬೆಡಕಪಳ್ಳಿಯ ರೈತ ಮಹಾದೇವಪ್ಪ ಪೊಲೀಸ್ ಪಾಟೀಲ ಆರೋಪಿಸುತ್ತಾರೆ. 

‘ಕಾಲುವೆ ಜಾಲದ ಬಲವರ್ಧನೆ ಕಾಮಗಾರಿ ಹೊಣೆ ಹೊತ್ತ ಕಂಪನಿ ಕಾಲುವೆಗಳನ್ನು ನಿರ್ವಹಿಸಬೇಕಿದೆ. ಆದರೆ, ಅಧಿಕಾರಿಗಳ ಅಸಮರ್ಪಕ ಮೇಲ್ವಿಚಾರಣೆ ಹಾಗೂ ಗುತ್ತಿಗೆ ಸಂಸ್ಥೆಯ ನಿರ್ಲಕ್ಷ್ಯದಿಂದ ಕಾಲುವೆಗಳು ನೀರಿನ ಜತೆಗೆ ಕಳೆಯಿಂದ ತುಂಬಿ ನಿರ್ವಹಣೆಯಿಲ್ಲದೇ ಸೊರಗುತ್ತಿವೆ. ಪ್ರತಿ ವರ್ಷ ಕಾಲುವೆ ಹೂಳು ತೆಗೆಯುತ್ತಿದ್ದರೂ ಈ ವರ್ಷ ಯಾಕೋ ತೆಗೆದಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ’ ಎಂದು ದಸ್ತಾಪುರದ ರೈತ ಶಿವರಾಯ ಕಟ್ಟಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಮಗಾರಿ ಹೊಣೆ ಹೊತ್ತ ಬೆಂಗಳೂರು ಮೂಲದ ಕಂಪನಿ ಮುಖ್ಯ ಕಾಲುವೆ ಹಾಗೂ ವಿತರಣಾ ಕಾಲುವೆಗಳ ಕಾಮಗಾರಿ ಕೆಲವು ಕಡೆ ಬಾಕಿ ಉಳಿಸಿಕೊಂಡು ಅಂತಿಮ ಬಿಲ್ಲು ಪಡೆದು ಒಪ್ಪಂದದಿಂದ ಬಿಡುಗಡೆ ಮಾಡಿಕೊಳ್ಳಲು ಹವಣಿಸುತ್ತಿದೆ. ಕಾಲುವೆ ಜಾಲದ ಬಲವರ್ಧನೆ ಕಾಮಗಾರಿ ಪೂರ್ಣಗೊಂಡು ಗುತ್ತಿಗೆ ಸಂಸ್ಥೆ ಇದರಿಂದ ಬಿಡುಗಡೆ ಹೊಂದುವವರೆಗೆ ಯೋಜನೆಯ ಕಾಲುವೆಗಳ ನಿರ್ವಹಣೆಗೆ ಅನುದಾನ ಬರುವುದಿಲ್ಲ ಎಂದು ದೂರಿದ್ದಾರೆ. 

‘ನಾನು ಬಂದ ಮೇಲೆ ಗುತ್ತಿಗೆ ಸಂಸ್ಥೆಗೆ ಒಂದು ಪೈಸೆ ಪಾವತಿಸಿಲ್ಲ. ಆದರೆ, ಕನಕಪುರ, ಚಿಮ್ಮನಚೋಡ ಸೇರಿದಂತೆ ಸುಮಾರು ಜಲಾಶಯದಿಂದ 50 ಕಿ.ಮೀವರೆಗೆ ಹೂಳು ತೆಗೆಯಲಾಗಿದೆ’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಮೃತ ಪವಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಆದರೆ, 40ರಿಂದ 45 ಕಿ.ಮೀ ವ್ಯಾಪ್ತಿಯ ಚಿಮ್ಮಾಈದಲಾಯಿ ದಸ್ತಾಪುರ ಮಧ್ಯೆ ಸುಮಾರು 2 ಕಿ.ಮೀ ಅಧಿಕ ಉದ್ದದ ಕಾಲುವೆಯಲ್ಲಿ ಕಳೆ ಬೆಳೆದಿದ್ದು, ಅಧಿಕಾರಿಗಳ ಹೇಳಿಕೆಯೇ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

‘ರೈತರ ಅಭಿಪ್ರಾಯ ಪಡೆದು ಬಿಲ್ಲು ಕೊಡಿ’

‘ಗುತ್ತಿಗೆ ಸಂಸ್ಥೆಯನ್ನು ಕಾಮಗಾರಿಯಿಂದ ಬಿಡುಗಡೆ ಮಾಡುವ ಮೊದಲು ಅಚ್ಚುಕಟ್ಟು ಪ್ರದೇಶದ ಹಳ್ಳಿಗಳಲ್ಲಿ ಡಂಗೂರು ಸಾರಿಸಿ ರೈತರ ಅಭಿಪ್ರಾಯ ಪಡೆದು ಕಂಪನಿಗೆ ಫೈನಲ್ ಬಿಲ್ಲು ಪಾವತಿಸಬೇಕು. ರೈತರ ಹೇಳಿಕೆ ದಾಖಲಿಸಿಕೊಳ್ಳಬೇಕು. ರೈತರನ್ನು ಕತ್ತಲಿನಲ್ಲಿಟ್ಟು ಕಾಮಗಾರಿಯ ಒಪ್ಪಂದದಿಂದ ಕಂಪನಿ ಬಿಡುಗಡೆಗೊಳಿಸಿದರೆ ಹೋರಾಟ ಅನಿವಾರ್ಯವಾಗುತ್ತದೆ’ ಎಂದು ಸಂತ್ರಸ್ತ ರೈತ ಮಹಾದೇವಪ್ಪ ಪೊಲೀಸ್ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

‘ಗುತ್ತಿಗೆದಾರರಿಗೆ ನೋಟಿಸ್‌ ನೀಡಿದ್ದೇವೆ’

‘2022–23ನೇ ಸಾಲಿನ ಎಸ್‌ಸಿಎಸ್‌ಪಿ–ಟಿಎಸ್‌ಪಿ ಯೋಜನೆ ಅಡಿಯಲ್ಲಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕೊಳವೆಬಾವಿಗಳು ಮಂಜೂರು ಮಾಡಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಫಲಾನುಭವಿಗಳ ಪಾಲಿಗೆ ನೀರಾವರಿಯ ಕನಸು ಗಗನ ಕುಸುಮವಾಗಿ ಪರಿಣಮಿಸಿದೆ. ಜೇವರ್ಗಿ ಮೂಲದ ಗುತ್ತಿಗೆದಾರ ಕಾಮಗಾರಿ ಹೊಣೆ ಹೊತ್ತಿದ್ದು ಕೆಲವು ಕಡೆ ಕೊಳವೆಬಾವಿ ಕೊರೆದಿದ್ದಾರೆ. ಇವುಗಳಿಗೆ ವಿದ್ಯುತ್ ಸಂಪರ್ಕ ಮತ್ತು ಮೋಟಾರ್ ನೀಡಿಲ್ಲ. ಇದರಿಂದಾಗಿ ರೈತರು ಅಸಹಾಯಕರಾಗಿ ಕಚೇರಿಗಳಿಗೆ ಅಲೆಯುವಂತಾಗಿದೆ’ ಎಂದು ಬಿಜೆಪಿ ಮುಖಂಡ ಅಶೋಕ ಚವ್ಹಾಣ ದೂರಿದ್ದಾರೆ.

‘ಈ ವಿಷಯ ನನ್ನ ಗಮನಕ್ಕೆ ಬಂದಿದ್ದು ಗುತ್ತಿಗೆದಾರರಿಗೆ ನಾನು ಯಾವುದೇ ಬಿಲ್ಲು ಪಾವತಿಸಿಲ್ಲ. ಬದಲಾಗಿ ಕಾಮಗಾರಿ ಪೂರ್ಣಗೊಳಿಸಲು ನೋಟಿಸ್‌ ಜಾರಿ ಮಾಡಿದ್ದೇನೆ’ ಎಂದು ಎಇಇ ಅಮೃತ ಪವಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.