ADVERTISEMENT

ಚಿಂಚೋಳಿ: ಹಿಂಗಾರು ಬೆಳೆಗೆ ವರವಾದ ನೀರು

ಕೆಳದಂಡೆ ಮುಲ್ಲಾಮಾರಿ ಯೋಜನೆ ಶೇ 80 ಕಾಮಗಾರಿ ಪೂರ್ಣ

ಜಗನ್ನಾಥ ಡಿ.ಶೇರಿಕಾರ
Published 5 ಫೆಬ್ರುವರಿ 2021, 5:31 IST
Last Updated 5 ಫೆಬ್ರುವರಿ 2021, 5:31 IST
ಚಿಂಚೋಳಿ ತಾಲ್ಲೂಕು ಗೌಡನಳ್ಳಿಯ ರೈತ ಜಗನ್ನಾಥ ಜಮಾದಾರ ಅವರ ಹೊಲದಲ್ಲಿ ಜೋಳದ ಬೆಳೆಗೆ ಮುಲ್ಲಾಮಾರಿ ಯೋಜನೆಯಿಂದ ನೀರುಣಿಸಿದ್ದರಿಂದ ಫಸಲು ಉತ್ತಮವಾಗಿ ಬಂದಿರುವುದು ರೈತ ಬುಧವಾರ ತೋರಿಸಿದರು
ಚಿಂಚೋಳಿ ತಾಲ್ಲೂಕು ಗೌಡನಳ್ಳಿಯ ರೈತ ಜಗನ್ನಾಥ ಜಮಾದಾರ ಅವರ ಹೊಲದಲ್ಲಿ ಜೋಳದ ಬೆಳೆಗೆ ಮುಲ್ಲಾಮಾರಿ ಯೋಜನೆಯಿಂದ ನೀರುಣಿಸಿದ್ದರಿಂದ ಫಸಲು ಉತ್ತಮವಾಗಿ ಬಂದಿರುವುದು ರೈತ ಬುಧವಾರ ತೋರಿಸಿದರು   

ಚಿಂಚೋಳಿ: ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನವೀಕರಣ ಕಾಮಗಾರಿ ಮುಂದುವರೆಸಿರುವ ಅಧಿಕಾರಿಗಳು ರೈತರಿಗೆ ನೆರವಾಗಲು ನೀರು ಹರಿಸಿದ್ದಾರೆ. ಇದರಿಂದ ಬೆಳೆಗಳಿಗೆ ನೀರು ದೊರೆತಿದೆ.

‘ನನ್ನ ಹೊಲದಲ್ಲಿ ಹಿಂದೆ ಎಕರೆಗೆ 2 ಚೀಲ ಜೋಳ ಇಳುವರಿ ಬಂದಿರಲಿಲ್ಲ. ಈ ವರ್ಷ ಮುಲ್ಲಾಮಾರಿ ಯೋಜನೆಯ ಕಾಲುವೆಯ ನೀರು ಎರಡು ಬಾರಿ ಬೆಳೆಗೆ ಸಿಕ್ಕಿದೆ. ಇದರಿಂದ ಬುತ್ತಿ ಬಿತ್ತಿ ತೆನೆ ಹೊತ್ತು ಜೋಳದ ಬೆಳೆ ಕಂಗೊಳಿಸುತ್ತಿದೆ. ಎಕರೆಗೆ 8 ಚೀಲ ಇಳುವರಿ ಬರುವ ಅಂದಾಜಿದೆ’ ಎಂದು ಗೌಡನಹಳ್ಳಿಯ ರೈತ ಜಗನ್ನಾಥ ಜಮಾದಾರ ತಿಳಿಸಿದರು.

‘ನಮಗೆ ಈ ವರ್ಷ ನೀರು ಬರುವುದು ಎಂಬ ನಂಬಿಕೆ ಇರಲಿಲ್ಲ. ತಡವಾಗಿ ನೀರು ಬಂದಿದೆ. ವಿತರಣೆ ನಾಲೆ ಕಾಮಗಾರಿ ನಡೆಸದ ಕಾರಣ ರೈತರು ಎಂಜಿನ್ ಮೂಲಕ ನೀರು ಪಡೆದಿದ್ದಾರೆ. ತೊಗರಿ, ಜೋಳದ ಬೆಳೆಗೆ ನೀರು ವರವಾಗಿದೆ. ಭವಿಷ್ಯದಲ್ಲಿ ಗೋಳಿ, ಶೇಂಗಾ, ಈರುಳ್ಳಿ, ಅರಶಿಣ ಬೆಳೆ ಬೆಳೆಯಲು ಯೋಜನೆ ಸಹಕಾರಿಯಾಗಲಿದೆ’ ಎಂದರು.

ADVERTISEMENT

‘ಪ್ರಸಕ್ತ ವರ್ಷ ಯೋಜನೆಯ ಜಲಾಶಯದಿಂದ ಮುಖ್ಯ ಕಾಲುವೆಯ 50 ಕಿ.ಮೀ.ವರೆಗೆ ನೀರು ಹರಿಸಲಾಗಿದೆ. ಇದು ನಮಗೆ ಖುಷಿ ತಂದಿದೆ. ಮುಂದಿನ ವರ್ಷ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಪಡೆಯುವುದು ಖಚಿತ’ ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಣಮಂತ ಪೂಜಾರಿ ತಿಳಿಸಿದರು.

‘ಯೋಜನೆಯ 80 ಕಿ.ಮೀ. ಉದ್ದದ ಮುಖ್ಯ ಕಾಲುವೆ ಬಲವರ್ದನೆ ಕಾಮಗಾರಿ, 64 ವಿತರಣೆ ನಾಲೆಗಳ ಜಾಲ ಅಭಿವೃದ್ಧಿ ನಡೆಯುತ್ತಿದೆ.ಇದರಲ್ಲಿ ಶೇ 80ರಷ್ಟು ಮುಖ್ಯ ಕಾಲುವೆಯ ಕಾಮಗಾರಿ ಪೂರ್ಣಗೊಂಡಿದ್ದು, ಶೇ 20 ಕಾಮಗಾರಿ ಪ್ರಗತಿಯಲ್ಲಿದೆ. ಹೆಚ್ಚಿನ ಪ್ರಮಾಣದಲ್ಲಿ ವಿತರಣೆ ನಾಲೆಗಳ ಕಾಮಗಾರಿ ಬಾಕಿಯಿದ್ದು ಸದ್ಯ ತೊಗರಿ ಮತ್ತು ಜೋಳದ ಬೆಳೆ ರೈತರ ಹೊಲದಲ್ಲಿದ್ದು ಇದರರಾಶಿಯಾಗುತ್ತಲೇ ವಿತರಣೆ ನಾಲೆ ಅಭಿವೃದ್ಧಿ ಪಡಿಸಲಾಗುವುದು’ ಎಂದು ವಿವರಿಸಿದರು.

ಮಾರ್ಚ್ ಅಂತ್ಯಕ್ಕೆ ಪೂರ್ಣ ಯತ್ನ: ಯೋಜನೆಯ ಸಮಗ್ರ ಕಾಮಗಾರಿ ಮಾರ್ಚ ಅಂತ್ಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಬಹುತೇಕ ಮುಖ್ಯಕಾಲುವೆಯ ಕಾಮಗಾರಿ ಅಂತಿಮ ಹಂತದಲ್ಲಿದೆ. ವಿತರಣೆ ನಾಲೆ 2 ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಸ್ಟಾರ್ ಬಿಲ್ಡರ್ಸ ಸಂಸ್ಥೆಯ ಎಂಜಿನಿಯರ್ ನಂದೀಶ್ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.