ADVERTISEMENT

ಚಿತ್ತಾಪುರ: ಟ್ರ್ಯಾಕ್ಟರ್ ಹತ್ತಿಸಿ ಪೊಲೀಸ್ ಕಾನ್‌ಸ್ಟೆಬಲ್ ಕೊಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 5 ಮೇ 2020, 17:24 IST
Last Updated 5 ಮೇ 2020, 17:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ತಾಪುರ (ಕಲಬುರ್ಗಿ ಜಿಲ್ಲೆ): ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ತಡೆಯಲು ಮುಂದಾದ ಹೆಡ್‌ ಕಾನ್‌ಸ್ಟೆಬಲ್‌ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ಮರಗೋಳ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಹೆಡ್‌ ಕಾನ್‌ಸ್ಟೆಬಲ್‌ ದತ್ತಾತ್ರೇಯ ಅವರು ಮರಗೋಳ ಗ್ರಾಮದ ಬೀಟ್ ಪೊಲೀಸ್ ಆಗಿದ್ದು ಬೆಳಿಗ್ಗೆ ಕರ್ತವ್ಯದ ಮೇಲೆ ಗ್ರಾಮದಲ್ಲಿ ಗಸ್ತು ಹೋಗಿದ್ದರು. ಆಗ ಅಕ್ರಮವಾಗಿ ಮರಳು ತುಂಬಿದ್ದ ಟ್ರ್ಯಾಕ್ಟರ್ ಎದುರಿಗೆ ಬಂದಿದೆ. ಅದನ್ನು ತಡೆಯಲು ಬೈಕ್ ಮೇಲೆ ಇದ್ದ ದತ್ತಾತ್ರೇಯ ಮುಂದಾಗಿದ್ದನ್ನು ಗಮನಿಸಿದ ಚಾಲಕ ಬೈಕ್ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೈಕ್ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಯತ್ನಿಸಿದಾಗ ದತ್ತಾತ್ರೇಯ ಅವರ ಕಾಲಿಗೆ, ಕೈಗೆ ಗಾಯಗಳಾಗಿವೆ. ಬೈಕ್ ನಜ್ಜುಗುಜ್ಜಾಗಿದೆ. ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚುವರಿ ಚಿಕಿತ್ಸೆಗೆ ಕಲಬುರ್ಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪಿಎಸ್ಐ ಶ್ರೀಶೈಲ್ ಅಂಬಾಟಿ ತಿಳಿಸಿದ್ದಾರೆ.

ADVERTISEMENT

ಕಾಟಮ್ಮದೇವರಹಳ್ಳಿ ಗ್ರಾಮದವರ ಟ್ರ್ಯಾಕ್ಟರ್ ಮುಡಬೂಳ ಗ್ರಾಮದ ಬೀಗರ ಹತ್ತಿರ ಇತ್ತು. ಅದನ್ನು ಅಕ್ರಮವಾಗಿ ಮರಳು ಸಾಗಾಟಕ್ಕೆ ಬಳಸಲಾಗುತ್ತಿತ್ತು. ಟ್ರ್ಯಾಕ್ಟರ್ ಜಪ್ತಿ ಮಾಡಿಕೊಳ್ಳಲಾಗಿದೆ ಪೊಲೀಸರು ತಿಳಿಸಿದ್ದಾರೆ.

ಅಪಘಾತ ಜರುಗಿದ ತಕ್ಷಣ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಚಾಲಕ ಮತ್ತು ಟ್ರ್ಯಾಕ್ಟರ್ ಮಾಲೀಕನ ವಿರುದ್ಧ ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.