ಕಲಬುರಗಿ: ಪ್ರವಾದಿ ಮಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿಯಿಂದ ಉಚ್ಛಾಟಿತಗೊಂಡಿರವ ನೂಪುರ್ ಶರ್ಮಾ, ನವೀನ್ ಕುಮಾರ್ ಜಿಂದಾಲ್ ಅವರ ಬಂಧನಕ್ಕೆ ಆಗ್ರಹಿಸಿ ರಜಾ ಅಕಾಡೆಮಿ ನೇತೃತ್ವದಲ್ಲಿ ಮುಸ್ಲಿಮರು ಶುಕ್ರವಾರ ನಗರದ ಮುಸ್ಲಿಂ ಚೌಕ್ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಪ್ರವಾದಿ ಮಹಮ್ಮದ್ ಬಗ್ಗೆ ಬಿಜೆಪಿ ನಾಯಕರು, ಕಾರ್ಯಕರ್ತರು ಸೇರಿ ಕೆಲವರು ಹಗುರವಾಗಿ ಮಾತನಾಡುತ್ತಿದ್ದು, ಹಲವೆಡೆ ಪ್ರಕರಣ
ದಾಖಲಾಗಿವೆ. ಹೀಗಿದ್ದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಬರೀ ಹೇಳಿಕೆ ನೀಡಿ, ಪ್ರಕಟಣೆ ಹೊರಡಿಸುವ ಬದಲು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಬೇಕು’ ಎಂದು ಅವರು ಒತ್ತಾಯಿಸಿದರು.
‘ತೆಲಂಗಾಣದ ರಾಜ ಸಿಂಗ್ ಎಂಬುವರು ಸೂಫಿ ಸಂತ ಹಜರತ್ ಖ್ವಾಜಾ ಗರೀಬ್ ನವಾಜ್ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಇದರಿಂದ ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ರಾಜಸ್ತಾನದ ಅಜ್ಮೀರ್ ಶರೀಫ್ ದರ್ಗಾ ಮೇಲೆ ನಾವು ಅಪಾರ ನಂಬಿಕೆ ಇರಿಸಿದ್ದೇವೆ. ಅವರನ್ನೂ ಕೂಡಲೇ ಬಂಧಿಸಬೇಕು’ ಎಂದು ಮಹಮ್ಮದ್ ಖಿಯಾಮ್ ಅಲಿ ಆಗ್ರಹಿಸಿದರು. ‘ದೇಶದ ಹಿಂದೂ ಮತ್ತು ಮುಸ್ಲಿಮರ ನಡುವೆ ಗಲಭೆ ಮೂಡಿಸುವ ಉದ್ದೇಶದಿಂದ ಇಂತಹ ಹೇಳಿಕೆ ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಂವಿಧಾನದ ವಿರುದ್ಧ ನಡೆದು ಕೊಳ್ಳಲಾಗುತ್ತಿದೆ.ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.