ಕಲಬುರಗಿ: ‘ಹೈದರಾಬಾದ್ನ ಜನರು ಸ್ವಾತಂತ್ರ್ಯದ ಗಾಳಿ ಉಸಿರಾಡುವಂತೆ ಮತ್ತು ಸ್ವತಂತ್ರ ಭಾರತದ ಭಾಗವಾಗುವಂತೆ ಮಾಡಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸಮರ್ಪಣೆ ನಾವು ಮರೆಯಬಾರದು’ ಎಂದು ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಹೇಳಿದರು.
ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಸಿಯುಕೆ) ಸೋಮವಾರ ನಡೆದ ರಾಷ್ಟ್ರೀಯ ಏಕತಾ ದಿನ ಮತ್ತು ಜಾಗೃತ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯದ ನಂತರ ಭಾರತದ ಏಕೀಕರಣಕ್ಕೆ ಪಟೇಲ್ ಅವರು ಮಹತ್ತರ ಕೊಡುಗೆ ನೀಡಿದ್ದಾರೆ’ ಎಂದರು.
ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ‘ಸರ್ದಾರ್ ಪಟೇರ್ ಅವರು ಭಾರತದ ಏಕೀಕರಣಕ್ಕೆ ಶ್ರಮಿಸಿದರು. ಆದರೆ, ಈಗ ದೇಶವನ್ನು ವಿಭಜಿಸುವ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿರುವುದನ್ನು ನೋಡುತ್ತಿದ್ದೇವೆ. ನಾವು ಅವುಗಳನ್ನು ಗಮನಿಸಿ ಸಹೋದರತ್ವ, ದೇಶಭಕ್ತಿ ಮತ್ತು ದೇಶದ ಐಕ್ಯತೆಗೆ ಕೆಲಸ ಮಾಡಬೇಕು’ ಎಂದರು.
ಸಿಯುಕೆ ಕುಲಸಚಿವ ಪ್ರೊ.ಬಸವರಾಜ ಪಿ.ಡೋಣೂರ ಮಾತನಾಡಿ, ‘ದೇಶ ಅಭಿವೃದ್ಧಿ ಕಾಣಬೇಕಾದರೆ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡಬಾರದು. ‘ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ’ ಎಂಬ ವಿಷಯದ ಮೇಲೆ ಜಾಗೃತ ಜಾಗೃತಿ ಸಪ್ತಾಹವನ್ನು ಆಚರಿಸುವಾಗ ನಾವು ಇಂದು ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಮಾಡಿದ್ದೇವೆ ಮತ್ತು ಅದನ್ನು ನಮ್ಮ ಕಾರ್ಯಗಳಲ್ಲಿಯೂ ಅನುಸರಿಸುವುದು ಕರ್ತವ್ಯವಾಗಿದೆ’ ಎಂದರು.
ಇದಕ್ಕೂ ಮುನ್ನ ವಿಶ್ವವಿದ್ಯಾಲಯದ ಆವರಣದಲ್ಲಿ ಏಕತಾ ಓಟ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.