ಕಲಬುರಗಿ: ‘ಮನುಷ್ಯನಿಗೆ ನಿರೀಕ್ಷೆಯ ತೂಕ ಕಡಿಮೆಯಾದಂತೆ, ನೆಮ್ಮದಿಯ ತೂಕ ಹೆಚ್ಚಾಗುತ್ತದೆ. ಸರ್ವರೂ ಜಾತಿ, ಮತ, ಪಂಥ ಎನ್ನದೆ ಒಂದಾಗಿ ಮಾಡುವ ಕಾರ್ಯದಲ್ಲಿ ದೇವರಿರುತ್ತಾನೆ‘ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ದಾಕ್ಷಾಯಣಿ ಎಸ್. ಅಪ್ಪ ಹೇಳಿದರು.
ನಗರದ ಸಂತೋಷ ಕಾಲೊನಿಯ ಕೆಎಚ್ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಕಾಯಕ, ದಾಸೋಹ ಹಾಗೂ ನಿಸ್ವಾರ್ಥ ಮನಸ್ಸಿನಿಂದ ಮಾಡಿದ ಕಾರ್ಯ ಅದು ಸ್ವರ್ಗದ ಬಾಗಿಲಿಗೆ ಹೋಗಿ ಮುಟ್ಟುತ್ತದೆ. ಇವನಾರವ ಇವನಾರವ ಎನ್ನದಿರಯ್ಯ ಇವ ನಮ್ಮವ ಇವ ನಮ್ಮವ ಇವ ನಮ್ಮ ಮನೆಯ ಮಗ ಎಂದೆನಿಸಯ್ಯಾ ಕೂಡಲಸಂಗಮದೇವಾ ಎನ್ನುವ ಬಸವಣ್ಣನ ವಾಣಿಯಂತೆ ಈ ಬಡಾವಣೆಯಲ್ಲಿ ಸರ್ವರೂ ನಮ್ಮವರೆಂದು ಒಂದಾಗಿ ಹಲವಾರು ಕಾರ್ಯಗಳನ್ನು ಮಾಡುತ್ತಾ ದಾಸೋಹ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಹಬ್ಬಗಳು ಸಮಾಜಕ್ಕೆ ಹಲವಾರು ಸಂದೇಶಗಳು ನೀಡುವುದರೊಂದಿಗೆ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ ಎಂದರು.
ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹಲವಾರು ಚುಟುಕಗಳೊಂದಿಗೆ ಜನರನ್ನು ರಂಜಿಸಿದರು.
ರಂಗಭೂಮಿ ನಟ, ನಿರ್ದೇಶಕ ನೀನಾಸಂ ಠಾಕೂರ್ ನಿರ್ದೇಶಿಸಿದ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ‘ರೂಪಕ’ವನ್ನು ಬಾಲ ಪ್ರತಿಭೆಗಳು ಪ್ರದರ್ಶಿಸಿದರು.
ವೇದಿಕೆಯ ಮೇಲೆ ಡಾ. ಅಲ್ಲಮಪ್ರಭು ದೇಶಮುಖ, ಕೆಎಚ್ಬಿ ಗ್ರೀನ್ ಪಾರ್ಕ್ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಇದ್ದರು.
ಬಾಲಪ್ರತಿಭೆಗಳಾದ ಅಮೃತ ಎಸ್. ಶೆಟ್ಟಿ, ಸಾನ್ವಿ ಬಿ ಕುಲಕರ್ಣಿ, ಶ್ರೀನಿಧಿ ಎಸ್. ವಾಡಿ, ಪ್ರೀತಿ ಆರ್.ಭೋಗ್ಲೆ ಇದ್ದರು. ಮಹಿಳೆಯರು ದಾಂಡಿಯಾ ನೃತ್ಯ ಪ್ರದರ್ಶಿಸಿದರು.
ಹಣಮಂತರಾಯ ಅಟ್ಟೂರ, ಬಸವರಾಜ ಹೆಳವರ ಸೇರಿದಂತೆ ಬಡಾವಣೆಯ ನಿವಾಸಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.